ಬೆಳಗಾವಿ: ಮಹಿಳಾ ಸಬಲೀಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ ಎಂದು ರಹವಾಸಿಗರ ಸಂಘ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ನಿರ್ಮಲಾ ಬಟ್ಟಲ ಹೇಳಿದ್ದಾರೆ.
ತಾಲೂಕಿನ ಅಲಾರವಾಡ ಜೈನ ಮಂದಿರದ ಸಭಾಭವನದಲ್ಲಿ ಖಾಸಬಾಗದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಈಚೆಗೆ ಆಯೋಜಿಸಿದ್ದ ವಿಚಾರಗೋಷ್ಠಿ, 201 ಸೋಲಾರ್ ದೀಪ ಹಸ್ತಾಂತರ ಹಾಗೂ 3001ನೇ ಸ್ವ-ಸಹಾಯ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮಹಿಳೆ ಪ್ರಗತಿ ಸಾಧಿಸಿದಾಗ ಮಾತ್ರ ಸಬಲರಾಗಲು ಸಾಧ್ಯ. ಮಹಿಳಾ ಸಬಲೀಕರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಮಹತ್ವದ ಪಾತ್ರ ನಿಭಾಯಿಸುತ್ತಿದೆ ಎಂದರು. ಜಿಲ್ಲಾ ಸೆಲ್ಕೋ ವ್ಯವಸ್ಥಾಪಕ ವಿನಾಯಕ ಹೆಗಡೆ ಫಲಾನುಭವಿಗಳಿಗೆ ಸೋಲಾರ್ ದೀಪಗಳನ್ನು ವಿತರಿಸಿದರು. ಪಂಚಕಮಿಟಿ ಸದಸ್ಯ ಬಾಹುಬಲಿ ಜನಗೌಡ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಸಂಘದ ನಿರ್ದೇಶಕ ಪ್ರದೀಪ ಜಿ., ಅಭಿನಂದನ ಪಾಟೀಲ, ಸೇವಾ ಪ್ರತಿನಿಧಿ ಭಾರತಿ ಜನಗೌಡ, ಹಾಗೂ ಅಲಾರವಾಡದ ಪದ್ಮಾವತಿ ಜ್ಞಾನವಿಕಾಸ ಕೇಂದ್ರದ ಸದಸ್ಯರು ಇತರರು ಇದ್ದರು. ಮಂಜುನಾಥ ಎನ್.ಆರ್. ಸ್ವಾಗತಿಸಿದರು. ಗಂಗೂಬಾಯಿ ಜಗತಾಪ ನಿರೂಪಿಸಿದರು. ರಾಧಿಕಾ ಪೂಜಾರಿ ವಂದಿಸಿದರು.