ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ಅವರಾತ್ರಿ ಅಮಾವಾಸ್ಯೆ ಅಂಗವಾಗಿ ಸಾವಿರಾರು ಭಕ್ತರು ಆಗಮಿಸಿದ್ದ ಹಿನ್ನೆಲೆಯಲ್ಲಿ ಶನಿವಾರ ಬಸ್ ನಿಲ್ದಾಣದಲ್ಲಿ ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದ ಭಕ್ತರು ಅಧಿಕವಾಗಿದ್ದರಿಂದ ಬಸ್ ಏರಲು ಪರದಾಡುತ್ತಿದ್ದ ದೃಶ್ಯ ಕಂಡುಬಂತು.
ಅಮಾವಾಸ್ಯೆ ಹಿನ್ನೆಲೆಯಲ್ಲಿ ಶುಕ್ರವಾರ ಮ.ಬೆಟ್ಟಕ್ಕೆ ಬೆಂಗಳೂರು, ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ, ಚಾಮರಾಜನಗರ ಹಾಗೂ ಇನ್ನಿತರೆ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅದರಲ್ಲೂ ಶಕ್ತಿ ಯೋಜನೆಯ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆ ಭಕ್ತರು ಆಗಮಿಸಿದ್ದರು. ಇನ್ನು ಕಳೆದ ಎರಡು ದಿನದ ಹಿಂದೆ ಸಾವಿರಾರು ಭಕ್ತರು ಕಾಲ್ನಡಿಗೆ ಮೂಲಕ ಆಗಮಿಸಿ ಮ.ಬೆಟ್ಟದಲ್ಲಿಯೇ ಬೀಡು ಬಿಟ್ಟಿದ್ದರು. ಶನಿವಾರ ದೇವರ ದರ್ಶನ ಹಾಗೂ ಪೂಜೆ ನೆರವೇರಿಸಿದ ಬಳಿಕ ಭಕ್ತರು ತಮ್ಮ ಊರುಗಳಿಗೆ ಹಿಂತಿರುಗಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಭಕ್ತರ ಸಂಖ್ಯೆಗೆ ಅನುಗುಣವಾಗಿ ಬಸ್ಗಳು ಲಭ್ಯವಿರಲಿಲ್ಲ. ಇದರಿಂದ ಬಸ್ ಏರಲು ಪ್ರಯಾಣಿಕರು ಗಂಟೆಗಟ್ಟಲೆ ಕಾದು ಕುಳಿತುಕೊಳ್ಳುವಂತಾಯಿತು.
ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಹೆಚ್ಚಾಗಿ ಮಹಿಳೆಯರು ಸೀಟು ಹಿಡಿಯಲು ಮುಗಿ ಬಿದ್ದರು. ಕೆಲವರು ದುಸ್ಸಾಹಸದಿಂದ ಕಿಟಕಿಯ ಮೂಲಕ ಬಸ್ನೊಳಗೆ ನುಗ್ಗಿ ಸೀಟು ಹಿಡಿಯುತ್ತಿದ್ದ ದೃಶ್ಯ ಕಂಡುಬಂತು. ಈ ವೇಳೆ ಪುರುಷ ಪ್ರಯಾಣಿಕರು ಸೀಟ್ಗಾಗಿ ಹರಸಾಹಸ ಪಡಬೇಕಾಯಿತು. ಇನ್ನು ಬಸ್ ಏರುವಾಗ ನೂಕು ನುಗ್ಗಲು ಉಂಟಾದ್ದರಿಂದ ಕೆಲವು ಭಕ್ತರು ಸೀಟು ಹಿಡಿಯಲಾಗದೇ ಬೇರೊಂದು ಬಸ್ ಏರಲು ಗಂಟೆಗಟ್ಟಲೇ ಕಾಯುವಂತಾಯಿತು. ಜತೆಗೆ ಪ್ರತಿ ಬಸ್ನಲ್ಲಿಯೂ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜನರು ಬಸ್ ಹತ್ತಿದ್ದರಿಂದ ಬಹುತೇಕ ಪ್ರಯಾಣಿಕರು ನಿಂತುಕೊಂಡೇ ಪ್ರಯಾಣಿಸುವಂತಾಯಿತು. ಇದರ ಲಾಭವನ್ನು ಪಡೆದ ಖಾಸಗಿ ಬಸ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಿದವು.