ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ತಾಲೂಕಿನ ಮಂಡಿಬೆಲೆ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ 12 ಸದಸ್ಯರು ನೂತನ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಜೆಡಿಎಸ್ ಬೆಂಬಲಿತರು 9, ಕಾಂಗ್ರೆಸ್ ಬೆಂಬಲಿತ ಇಬ್ಬರು, ಬಿಜೆಪಿ ಬೆಂಬಲಿತ ಒಬ್ಬರು ಸೇರಿ ಒಟ್ಟು 12 ಜನ ಅವಿರೋಧ ಆಯ್ಕೆಗೊಂಡಿದ್ದಾರೆ.
ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ ಮಾತನಾಡಿ, ಮಂಡಿಬೆಲೆ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಜೆಡಿಎಸ್ ಬೆಂಬಲಿತ 9 ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡಿದ್ದು, ಉತ್ತಮ ಸೇವೆ ಸಲ್ಲಿಸಲಿದ್ದಾರೆ. ಸಹಕಾರ ಸಂಘಗಳು ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ರೂಪಿಸುವುದರ ಮೂಲಕ ಮಾದರಿ ಸಂಘಗಳಾಗಿ ಮಾಡಬೇಕು. ಅವಿರೋಧವಾಗಿ ಆಯ್ಕೆಯಾಗಿರುವ ಎಲ್ಲ ನಿರ್ದೇಶಕರು ಉತ್ತಮ ಕಾರ್ಯನಿರ್ವಹಿಸಿ ರೈತರಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ನೂತನ ನಿರ್ದೇಶಕ ಹಾಗೂ ತಾಲೂಕು ಸೊಸೈಟಿ ನಿರ್ದೇಶಕ ಗಂಗಾಧರ್ ಮಾತನಾಡಿ, ಕಳೆದ 30 ವರ್ಷಗಳಿಂದ 6ಬಾರಿ ನಿರ್ದೇಶಕನಾಗಿ ಹಾಗೂ ಮಾಜಿ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಸಂಘದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಶ್ರಮಿಸಲಾಗುವುದು. ಪ್ರತಿ ರೈತರಿಗೆ ಸಂಘದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ನೀಡಲಾಗುವುದು. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ನೀಡುತ್ತಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.
ಆಯ್ಕೆಯಾದ ನಿರ್ದೇಶಕರು ನೂತನ ನಿರ್ದೇಶಕರಾದ ಗಂಗಾಧರ್, ದೇವರಾಜ್, ಚೆನ್ನೇಗೌಡ, ಕೆಂಪೇಗೌಡ, ರಾಜಣ್ಣ, ಮಂಜುಳಾ, ಗೀತಾ, ಶ್ರೀನಾಥ್, ತಿಮ್ಮರಾಯಪ್ಪ, ಕೇಶವ್, ರಾಮಚಂದ್ರಪ್ಪ, ಮಲ್ಲೇಶ್ ಅವಿರೋಧ ಆಯ್ಕೆಗೊಂಡಿದ್ದಾರೆ.