More

    ತ್ರಿಕೋನ ಸ್ಪರ್ಧೆಯಲ್ಲಿ ಈಜಿ ದಡ ಸೇರಿದ ಮುನಿಯಪ್ಪ

    ಮತ ಗಳಿಕೆ ಪ್ರಮಾಣ ಹೆಚ್ಚಿಸಿಕೊಂಡ ಬಿಜೆಪಿ ಕೈ ಹಿಡಿದು ನಡೆಸಿದ ಗ್ಯಾರಂಟಿ ಕಾರ್ಡ್, ಆಡಳಿತ ವಿರೋಧ

    ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
    ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಊಹೆಗೂ ಮೀರಿ ಕಾಂಗ್ರೆಸ್ ಗೆಲುವು ಕಂಡಿದೆ. ಕ್ಷೇತ್ರದಲ್ಲಿ ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ವಿಜಯಲಕ್ಷ್ಮೀ ಒಲಿದಿದ್ದಾಳೆ.
    ಜೆಡಿಎಸ್ ಭದ್ರಕೋಟೆಯಾಗಿದ್ದ 11 ಅಭ್ಯರ್ಥಿಗಳು ಕಣದಲ್ಲಿದ್ದರೂ, ಜೆಡಿಎಸ್ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಈ ಎಲ್ಲದರ ನಡುವೆ ಮುನಿಯಪ್ಪ ಜಯಶೀಲರಾಗಿದ್ದಾರೆ. ನಿಸರ್ಗ ನಾರಾಯಣಸ್ವಾಮಿ ಹಾಗೂ ಪಿಳ್ಳಮುನಿಶಾಮಪ್ಪ ಹೊರತುಪಡಿಸಿ ಉಳಿದ 8 ಮಂದಿ ಠೇವಣಿ ಕಳೆದುಕೊಂಡಿದ್ದಾರೆ.
    ಮತಗಳಿಕೆ ವಿಚಾರದಲ್ಲಿ ಜೆಡಿಎಸ್, ಕಾಂಗ್ರೆಸ್‌ಗೆ ತಲಾ 70 ಸಾವಿರ ಮತಗಳು ಬಿದ್ದಿವೆ. ಜೆಡಿಎಸ್ ಅಭ್ಯರ್ಥಿ ಕಳೆದ ಸಾಲಿನಲ್ಲಿ 86 ಸಾವಿರ ಮತ ಗಳಿಸಿದರೆ, ಈ ಬಾರಿ 68 ಸಾವಿರ ಪಡೆದರು. ಈ ಮೂಲಕ 18 ಸಾವಿರ ಮತಗಳು ಕಡಿಮೆಯಾಗಿದೆ. ಕಾಂಗ್ರೆಸ್ 73 ಸಾವಿರಕ್ಕೂ ಹೆಚ್ಚು ಮತ ಪಡೆಯವ ಮೂಲಕ 3 ಸಾವಿರ ಮತಗಳು ಹೆಚ್ಚಳವಾಗಿವೆ. ಇನ್ನು ಬಿಜೆಪಿಗೆ ಕಳೆದ ಬಾರಿ 9,500 ಹಾಗೂ ಅದರ ಹಿಂದಿನ ಅವಧಿಯಲ್ಲಿ 14,500 ಮತಗಳು ಲಭಿಸಿದ್ದವು. ಈ ಬಾರಿ ಪಿಳ್ಳಮುನಿಶಾಮಪ್ಪ ಸ್ಪರ್ಧೆಯಿಂದ 34 ಸಾವಿರಕ್ಕೂ ಹೆಚ್ಚು ಮತಗಳು ಕಮಲಕ್ಕೆ ಸಂದಿದೆ. ಅಂದರೆ 20 ಸಾವಿರ ಮತಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನೋಟಾಗೆ ಈ ಬಾರಿ 1500 ಮತಗಳು ಬಿದ್ದು, ಬಹುಚರ್ಚಿತ ವಿಷಯವಾಗಿದೆ.
    ಗೆಲುವು-ಸೋಲು ಕುರಿತು ಕ್ಷೇತ್ರದ ಮತದಾರರು ಅಲ್ಲಲ್ಲಿ ಪರಸ್ಪರ ಚರ್ಚಿಸತೊಡಗಿದ್ದಾರೆ. ಬಿಜೆಪಿ ಸರ್ಕಾರದಲ್ಲಿನ ಬೆಲೆ ಏರಿಕೆ, ಕಾಂಗ್ರೆಸ್‌ನ ಗ್ಯಾರಂಟಿಗಳ ಭರವಸೆ ಕೆಲಸ ಮಾಡಿದೆ. ಇನ್ನು ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಅವರು ಹಿಂದೆ ಜೆಡಿಎಸ್ ಶಾಸಕರಾಗಿದ್ದರು. ಅವರು ಜೆಡಿಎಸ್ ಅಭ್ಯರ್ಥಿಯ ಮತ ಕಸಿಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು.

    ಒಮ್ಮೆ ಗೆದ್ದವರು ಮತ್ತೆ ಗೆದ್ದಿಲ್ಲ ಮತ್ತೊಂದು ವಲಯದ ಚರ್ಚೆಗಳ ಪ್ರಕಾರ ಈ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಸತತವಾಗಿ ಮತ್ತೊಮ್ಮೆ ಗೆದ್ದ ಇತಿಹಾಸವಿಲ್ಲ. ಇದುವರೆವಿಗೂ ಸಚಿವರಾಗುವ ಭಾಗ್ಯ ಯಾರಿಗೂ ಸಿಕ್ಕಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ನಲ್ಲಿ 15 ಕ್ಕೂ ಹೆಚ್ಚು ಆಕಾಂಕ್ಷಿಗಳು ಪಕ್ಷದಿಂದ ಸ್ಪರ್ಧಿಸುವ ಸಲುವಾಗಿ ಕ್ಷೇತ್ರದಲ್ಲಿ ಗುರುತಿಸಿಕೊಂಡು ಪಕ್ಷದ ಪ್ರಚಾರ ಕಾರ್ಯ ಜನಸಂಪರ್ಕದಲ್ಲಿ ತೊಡಗಿಸಿಕೊಂಡಿದ್ದರೂ ಹತ್ತು ವರ್ಷಗಳಿಂದ ಕಳೆದುಕೊಂಡ ಕ್ಷೇತ್ರವನ್ನು ಈ ಬಾರಿ ಉಳಿಸಿಕೊಳ್ಳಲೇಬೇಕೆಂದು ವರಿಷ್ಠರು ಕೇಂದ್ರ ಮಾಜಿ ಸಚಿವ ಕೆಎಚ್. ಮುನಿಯಪ್ಪ ಅವರನ್ನು ಕಣಕ್ಕಳಿಸಿ ಕ್ಷೇತ್ರ ಕೈವಶ ಮಾಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts