ಮುಂಬೈ: ಏಕನಾಥ್ ಶಿಂಧೆ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಮಹಾರಾಷ್ಟ್ರದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿಗೆ ತೆರೆ ಎಳೆದಿದ್ದಾರೆ.
ಮೊದ ಮೊದಲು ದೇವೇಂದ್ರ ಫಡ್ನವಿಸ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿತ್ತಾದರೂ, ಕೊನೇ ಗಳಿಗೆಯಲ್ಲಿ ಶಿಂಧೆ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು. ಫಡ್ನವಿಸ್ ಡಿಸಿಎಂ ಸ್ಥಾನಕ್ಕೆ ತೃಪ್ತಿಪಡೆದುಕೊಂಡರು.
ಮಹಾರಾಷ್ಟ್ರದಲ್ಲಿ ಇದೇನೂ ಹೊಸ ಬೆಳವಣಿಗೆಯಲ್ಲ, ಸಿಎಂ ಆಗಿ ಮೆರೆದವರು ನಂತರ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಹಲವು ಉದಾಹರಣೆಗಳಿವೆ. ಇವರಲ್ಲಿ ಐದನೇಯವರು ಫಡ್ನವಿಸ್ ಆಗಿದ್ದಾರೆ. ಈ ಮೊದಲು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿದ್ದವರು ನಂತರ ಡಿಸಿಎಂ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆ ನಾಲ್ವರ ಕುರಿತು ಇಲ್ಲಿದೆ ಮಾಹಿತಿ.
ಶಂಕರ್ರಾವ್ ಚವಾಣ್: ಕಾಂಗ್ರೆಸ್ ನಾಯಕರಾಗಿದ್ದ ಇವರು 1975ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿತ್ತಾರೆ. ಇವರ ಬದಲಾಗಿ 1977ರಲ್ಲಿ ವಸಂತ್ದಾದ ಪಾಟೀಲ್ ಅವರನ್ನು ಸಿಎಂ ಆಗಿ ನೇಮಕ ಮಾಡಲಾಗುತ್ತದೆ. ಈ ಬಳಿಕ ಶರದ್ ಪವಾರ್ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸುತ್ತಾರೆ.
ಶಿವಾಜಿರಾವ್ ಪಾಟೀಲ್ ನಿಲಂಗೆಕರ್: 1985ರಲ್ಲಿ ಮುಖ್ಯಮಂತ್ರಿಯಾಗಿದ್ದ ಇವರು ನಂತರ ಸುಶೀಲ್ ಕುಮಾರ್ ಶಿಂಧೆ ಅವರ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ನಾರಾಯಣ ರಾಣೆ: 1999ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಇವರು ಕೂಡ ವಿಲಾಸ್ ರಾವ್ ದೇಶ್ಮುಖ್ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗುತ್ತಾರೆ.
ಅಶೋಕ್ ಚವಾಣ್: 2008 ರಿಂದ 2010ರಲ್ಲಿ ಮಹಾರಾಷ್ಟ್ರದ ಸಿಎಂ ಆಗಿದ್ದ ಚವಾಣ್, ಉದ್ಧವ್ ಠಾಕ್ರೆ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಸೇವೆ ಸಲ್ಲಿಸುತ್ತಾರೆ. (ಏಜೆನ್ಸೀಸ್)