ತರೀಕೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್ಡೌನ್ನಿಂದ ಆರ್ಥಿಕ ಹಿನ್ನಡೆ ಅನುಭವಿಸಿದರೂ ಜನರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸುತ್ತಿವೆ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು.
ಶುಕ್ರವಾರ ಹಾದಿಕೆರೆ ಗ್ರಾಮದಲ್ಲಿ ನರೇಗಾ ಯೋಜನೆಯ 18.25 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸುತ್ತಿರುವ ಭಾರತ್ ನಿರ್ವಣ್ ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಎಲ್ಲ ವರ್ಗದ ಅಶಕ್ತರ ನೆರವಿಗೆ ನಿಂತಿದ್ದು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೊಷಿಸಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಸರ್ಕಾರ ಕರೊನಾ ನಿಯಂತ್ರಣಕ್ಕೆ ವಿಶೇಷ ಒತ್ತು ನೀಡಿ ಕೆಲಸ ಮಾಡುತ್ತಿದೆ. ಸಂಕಷ್ಟದ ನಡುವೆ ಕರೊನಾ ಬಡಿದೋಡಿಸಲು ಹೋರಾಟ ನಡೆಸುತ್ತಿದೆ. ಕರೊನಾ ಜತೆ ಜೀವನ ಸಾಗಿಸಬೇಕಿರುವುದರಿಂದ ಜನ ಎಚ್ಚರಿಕೆವಹಿಸುವ ಅನಿವಾರ್ಯತೆ ಇದೆ ಎಂದರು.
ಲಾಕ್ಡೌನ್ ವೇಳೆ ಗ್ರಾಮಸ್ಥರು ಸ್ವಯಂ ದಿಗ್ಭಂಧನ ವಿಧಿಸಿ ನಿಯಮ ಪಾಲನೆ ಮಾಡುವ ಜತೆಗೆ ಕೆಲ ದಾನಿಗಳು ಗ್ರಾಪಂನೊಂದಿಗೆ ಕೈಜೋಡಿಸಿ ಮನೆ ಮನೆಗೆ ಉಚಿತ ಮಾಸ್ಕ್ ವಿತರಿಸಿರುವುದು ಅಭಿನಂದಾರ್ಹ. ಪ್ರಸ್ತುತ ಜಿಲ್ಲೆ ಹಸಿರು ವಲಯದಲ್ಲಿದ್ದರೂ ಲಾಕ್ಡೌನ್ ಸಡಿಲಿಕೆಗೆ ವಿನಾಯಿತಿ ನೀಡಿದ ನಂತರ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುತ್ತಿರುವುದು ಆತಂಕ ಹೆಚ್ಚಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.