ಕೊಪ್ಪ:ಪ್ರತಿ ಕ್ಷೇತ್ರದಲ್ಲೂ ಮಹಿಳೆಯರು ಗುರುತಿಸಿಕೊಳ್ಳುತ್ತಿದ್ದು ಮಹಿಳಾ ಸಬಲೀಕರಣವಾದಾಗ ಮಾತ್ರ ಹೆಚ್ಚಿನ ಅಭಿವೃದ್ಧಿ ಸಾಧ್ಯ ಎಂದು ತಹಸೀಲ್ದಾರ್ ಮಂಜುಳಾ ಬಿ.ಹೆಗಡಾಳ ಹೇಳಿದರು.
ಶ್ರೀ ಸಾಯಿ ಗ್ರೂಪ್ ಸಂಘಟನೆ ಪುರಭವನದಲ್ಲಿ ಹಮ್ಮಿಕೊಂಡಿದ್ದ ಮಲೆನಾಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಲೆನಾಡ ಅನೇಕ ಮಹಿಳೆಯರು ತಾವೇ ತಯಾರಿಸಿದ ನಿತ್ಯ ಬಳಕೆ ವಸ್ತುಗಳಾದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಮುಂತಾದ ವಸ್ತುಗಳು ಮತ್ತು ಗೃಹಲಂಕಾರಿಕ ಹಾಗೂ ಮುಂತಾದವ ವಸ್ತುಗಳನ್ನು ಮಾರುಕಟ್ಟೆ ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡು ಅರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಸರ್ಕಾರಗಳು ಮಹಿಳೆಯರು ಸ್ವ ಉದ್ಯೋಗ ಮಾಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಶ್ರೀ ಸಾಯಿ ಗ್ರೂಪ್ ಮುಖ್ಯಸ್ಥೆ ಅನ್ನಪೂರ್ಣ ನರೇಶ್ ಮಾತನಾಡಿ, ಇಲ್ಲಿನ ಮಹಿಳೆಯರು ಮನೆಯಲ್ಲಿ ತಾಯಿ ಮಾಡಿದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ನೆರವಾಗುವಂತೆ ಮಲೆನಾಡು ಹಬ್ಬ ಎನ್ನುವ ಒಂದು ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 50ಕ್ಕಿಂತ ಹೆಚ್ಚು ಅಂಗಡಿ ಮಳಿಗೆಗಳು ತೆರೆದಿದ್ದು ಮಲೆನಾಡಿನ ಮಹಿಳೆಯರಿಂದ ತಯಾರಾಗುವ ವಿಶೇಷ ತಿಂಡಿ ತಿನಿಸುಗಳು, ಮತ್ತು ಬಗೆ ಬಗೆಯ ಆಹಾರ ಖಾದ್ಯಗಳು, ಗೃಹೋಪಯೋಗಿ ಮತ್ತು ಗೃಹಲಂಕಾರ ವಸ್ತುಗಳು, ಕೃಷಿ ಯಂತ್ರೋಪಕರಣ, ಅಡಕೆ ಸುಲಿಯುವ ಯಂತ್ರಗಳ ಪ್ರಾತ್ಯಕ್ಷಿಕೆ ಪ್ರದರ್ಶನ ನಡೆಯಿತು.