ದೇವದುರ್ಗ: ಕ್ಷಯ ರೋಗ ನಿರ್ಮೂಲನೆಗೆ ಸರ್ಕಾರ ಪಣತೊಟ್ಟಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಆರ್ಥಿಕ ಸ್ಥಿತಿವಂತರು ಕ್ಷಯ ರೋಗಿಗಳನ್ನು ದತ್ತು ಪಡೆದು ರೋಗ ನಿರ್ಮೂಲನೆಗೆ ಇಲಾಖೆ ಜತೆ ಕೈಜೋಡಿಸಬೇಕೆಂದು ಕ್ಷಯ ರೋಗ ಮೇಲ್ವಿಚಾರಕ ರವಿಶುಕ್ಲ ಮನವಿ ಮಾಡಿದರು.
ತಾಲೂಕಿನ ತೆಗ್ಗಿಹಾಳ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಷಯ ರೋಗ ನಿರ್ಮೂಲನೆ ಘಟಕ ಬುಧವಾರ ಆಯೋಜಿಸಿದ್ದ ಕ್ಷಯ ರೋಗ ತಪಾಸಣೆ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ದಾನಿಗಳು ರೋಗಿಗಳನ್ನು ದತ್ತು ಪಡೆಯಲು ಅವಕಾಶವಿದೆ. ಕನಿಷ್ಠ ಒಂದು ವರ್ಷದವರೆಗೆ ದತ್ತು ಪಡೆದು ರೋಗಿಗಳಿಗೆ ಪೌಷ್ಟಿಕ ಆಹಾರ ವಿತರಿಸುವ ಮೂಲಕ ಕ್ಷಯ ಮುಕ್ತ ಭಾರತಕ್ಕೆ ಕೈಜೋಡಿಸಬೇಕು ಎಂದರು.
ಕ್ಷಯ ರೋಗ ಪತ್ತೆಯಾದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು. 6 ತಿಂಗಳ ಹೆಚ್ಚಿನ ಅವಧಿಗೆ ಚಿಕಿತ್ಸೆ ಜತೆಗೆ ಪೋಷಣ ಯೋಜನೆಯಡಿ ಪ್ರತಿ ತಿಂಗಳು 500 ರೂ. ಸಹಾಯಧನ ಫಲಾನುಭವಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ಹಿರಿಯ ಮೇಲ್ವಿಚಾರಕ ಚಸ್ಮುದ್ದಿನ್ ಮಾತನಾಡಿದರು. ಗ್ರಾಪಂ ಸದಸ್ಯೆ ವಿಜಯಲಕ್ಷ್ಮೀ, ಆರೋಗ್ಯ ನಿರೀಕ್ಷಣಾಧಿಕಾರಿ ಪಾರ್ವತಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಶಿವಕಲಾ, ಸಮುದಾಯ ಆರೋಗ್ಯ ಅಧಿಕಾರಿ ಪರಿಮಳಾ, ಆಶಾ ಕಾರ್ಯಕರ್ತೆ ನಾಗಮ್ಮ, ಅಂಗನವಾಡಿ ಕಾರ್ಯಕರ್ತೆ ಗೋವಿಂದಮ್ಮ ಇದ್ದರು.