ದೇವದುರ್ಗ: ಕಲುಷಿತ ವಾತಾವರಣದಿಂದ ಸಣ್ಣವರಲ್ಲೂ ನಾನಾ ರೋಗ ಆವರಿಸುತ್ತಿದ್ದು, ಮಧುಮೇಹಿಗಳು ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಎಂದು ಕ್ಷಯರೋಗ ಮೇಲ್ವಿಚಾರಕ ರವಿ ಶುಕ್ಲ ಹೇಳಿದರು.
ತಾಲೂಕಿನ ಬೊಮ್ಮನಾಳದಲ್ಲಿ ಆರೋಗ್ಯ ಇಲಾಖೆ, ಕ್ಷಯ ರೋಗ ಹಾಗೂ ಎನ್ಸಿಡಿ ವಿಭಾಗದಿಂದ ಆಯೋಜಿಸಿದ್ದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಸಣ್ಣಪುಟ್ಟ ಕಾಯಿಲೆ ಬಂದರೂ ತಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಕ್ಷಯ ಹಾಗೂ ಮಧುಮೇಹಕ್ಕೆ ವೈದ್ಯರ ಸಲಹೆಯಂತೆ ಸೂಕ್ತ ಔಷಧ ಪಡೆದರೆ ರೋಗದಿಂದ ಗುಣಮುಖರಾಗಬಹುದು. ಇದರ ಜತೆಗೆ ಕರೊನಾ ತಡೆಗೆ ಪ್ರತಿಯೊಬ್ಬರೂ ಎರಡೂ ಡೋಸ್ ಲಸಿಕೆ ಪಡೆದು ಆರೋಗ್ಯ ರಕ್ಷಿಸಿಕೊಳ್ಳಬೇಕು ಎಂದರು.
ನಂತರ ಮಧುಮೇಹ ಹಾಗೂ ಕ್ಷಯ ರೋಗ ಕುರಿತು ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು. ಹಿರಿಯ ಮೇಲ್ವಿಚಾರಕ ಭೀಮೇಶಪ್ಪ, ಹನುಮಂತ ಹೂಗಾರ, ಸಮುದಾಯ ಆರೋಗ್ಯ ಅಧಿಕಾರಿ ಸುನೀಲ್ಕುಮಾರ್, ಶ್ರವಣಕುಮಾರ, ತಾರಾ, ವಿಶ್ವನಾಥ, ಹೊನ್ನಪ್ಪ, ಶಿವಪ್ಪ, ಹಂಪಯ್ಯ ಇತರರಿದ್ದರು.