ದೇವದುರ್ಗ: ತುಮಕೂರಿನ ಶ್ರೀ ಸಿದ್ಧಂಗಾ ಮಠದ ಮಾದರಿಯಲ್ಲಿ ಶಾಸಕ ಕೆ.ಶಿವನಗೌಡ ನಾಯಕರು ಕೆಎಸ್ಎನ್ ಅನ್ನದಾಸೋಹ ಕೇಂದ್ರದ ಮೂಲಕ ನಿತ್ಯ 40 ಸಾವಿರ ಜನರಿಗೆ ಊಟ ವಿತರಣೆ ಮಾಡುತ್ತಿರುವುದು ಎಲ್ಲ ಪಕ್ಷದ ಜನಪ್ರತಿನಿಧಿಗಳಿಗೆ ಮಾಡೆಲ್ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಶಾಸಕ ಗೃಹ ಕಚೇರಿಯಲ್ಲಿ ಆರಂಭಿಸಿರುವ ಕೆಎಸ್ಎನ್ ಅನ್ನದಾಸೋಹ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದಿನವೂ 40 ಸಾವಿರ ಜನರಿಗೆ ತಿಂಗಳು ಪರ್ಯಂತ ಊಟ ನೀಡುವುದು ಸಾಮಾನ್ಯ ಕೆಲಸವಲ್ಲ. ಕೋವಿಡ್-19 ಸಂಕಷ್ಟ ಸಂದರ್ಭ ಶಿವನಗೌಡ ನಾಯಕರು ಜನರ ನೆರವಿಗೆ ನಿಂತಿರುವುದು ಶ್ಲಾಘನೀಯ ಎಂದರು.
ಅಭಿವೃದ್ಧಿಯೊಂದೇ ಜನಪ್ರತಿನಿಧಿಗಳ ಅಜೆಂಡಾ ಆಗಬಾರದು. ಅದರ ಜತೆಗೆ ಸಮಾಜಸೇವೆ, ಸಂಕಷ್ಟದಲ್ಲಿ ಇರುವವರಿಗೆ ಸ್ಪಂದಿಸುವ ಗುಣವೂ ಇರಬೇಕು. ಶಿವನಗೌಡ ನಾಯಕ ಈ ಎರಡೂ ಮಾಡುತ್ತಿದ್ದಾರೆ. ಇವರ ಕಾರ್ಯ ನಿರಂತರ ಮುಂದುವರಿಯಲಿ ಎಂದರು. ಸಂಸದ ಸಂಗಣ್ಣ ಕರಡಿ, ಶಾಸಕ ಕೆ.ಶಿವನಗೌಡ ನಾಯಕ, ಮುಖಂಡ ತ್ರಿವಿಕ್ರಮ ಜೋಷಿ, ಎಸಿ ಸಂತೋಷ ಕಾಮೆಗೌಡ, ತಹಸೀಲ್ದಾರ್ ಮಧುರಾಜ್ ಯಾಳಗಿ, ಡಿವೈಎಸ್ಪಿ ಎಸ್.ಎಸ್.ಹುಲ್ಲೂರು, ಸಿಪಿಐ ಆರ್.ಎಂ.ನದಾಪ್ ಇದ್ದರು.
ಕಂಟ್ರೋಲ್ನಲ್ಲಿದೆ ಕರೊನಾ
ಜಿಲ್ಲಾಡಳಿತವು ಕಠಿಣ ಲಾಕ್ಡೌನ್ ಜಾರಿ ಮಾಡಿದ್ದರಿಂದ ಕರೊನಾ ಕಂಟ್ರೋಲ್ಗೆ ಬಂದಿದೆ. ಕೆಲ ಜಿಲ್ಲೆಗಳಲ್ಲಿ ಅರ್ಧಲಾಕ್ಡೌನ್ ಮಾಡಿದರೆ, ನಮ್ಮಲ್ಲಿ ಮೂರು ದಿನ ಸಂಪೂರ್ಣ ಲಾಕ್ಡೌನ್ ಮಾಡಿ, ಜಿಲ್ಲಾಡಳಿತದ ನಡೆ ಹಳ್ಳಿಯ ಕಡೆ ಎನ್ನುವ ಅಭಿಯಾನ ಆರಂಭಿಸಲಾಗಿತ್ತು. ಅಲ್ಲದೆ ಒಪೆಕ್, ರಿಮ್ಸ್ನಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಆರೈಕೆ ಮಾಡಿದ್ದರಿಂದ ಕರೊನಾ ಶೇ.10ಕ್ಕಿಂತ ಕಡಿಮೆಯಾಗಿದೆ. ಜೂ.7ರವರೆಗೆ ಲಾಕ್ಡೌನ್ ಇರಲಿದೆ. ಬ್ಲಾೃಕ್ ಫಂಗಸ್ಗೆ ಔಷಧ ಕೊರತೆಯಿದ್ದು, ಕೇಂದ್ರ ಸಚಿವರಾದ ಸದಾನಂದಗೌಡ, ಪ್ರಲ್ಹಾದ ಜೋಶಿಯೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಔಷಧ ಪಡೆಯಲಾಗುತ್ತಿದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.