ಕೆಎಸ್ಎನ್ ಅನ್ನದಾಸೋಹ ಕೇಂದ್ರಕ್ಕೆ ಭೇಟಿ
ದೇವದುರ್ಗ: ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಉಚಿತವಾಗಿ ವ್ಯಾಕ್ಸಿನ್ ಹಾಗೂ ಪಡಿತರ ನೀಡುತ್ತಿದ್ದು, ಶಾಸಕ ಕೆ.ಶಿವನಗೌಡ ನಾಯಕ ಕ್ಷೇತ್ರದ ಜನರಿಗೆ ಊಟ, ಮಾಸ್ಕ್, ಕುಡಿವ ನೀರನ್ನು ಉಚಿತವಾಗಿ ನೀಡುವ ಮೂಲಕ ಮೋದಿ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಪಟ್ಟಣದ ಕೆಎಸ್ಎನ್ ಅನ್ನದಾಸೋಹ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು. ದೇವದುರ್ಗ, ಸಿರವಾರ, ಮಾನ್ವಿ ತಾಲೂಕಿನ ಜನರಿಗೆ ಶಿವನಗೌಡ ನಾಯಕ ಸಂಕಷ್ಟದಲ್ಲಿ ಊಟ ನೀಡುತ್ತಿರುವುದು ಶ್ಲಾಘನೀಯ. ಜನರಿಗೆ ತಿಂಗಳ ಪರ್ಯಂತ ಊಟ ನೀಡುವುದು ಸಾಮಾನ್ಯವಲ್ಲ. ಕೆಲವರು ನೀರು, ಪಡಿತರ ನೀಡಿದರೆ, ಶಿವನಗೌಡ ನಾಯಕ ಹಸಿದ ಹೊಟ್ಟೆಗೆ ಅನ್ನ ನೀಡಿ, ಅನ್ನಬ್ರಹ್ಮರಾಗಿದ್ದಾರೆ. ಸರ್ಕಾರ ಮಾಡದ ಕೆಲಸವನ್ನು ಕೆಎಸ್ಎನ್ ಮಾಡುತ್ತಿದ್ದು, ನಿತ್ಯ 40ಸಾವಿರ ಜನರಿಗೆ ಊಟ ನೀಡುತ್ತಿದ್ದಾರೆ. ಜತೆಗೆ ಕೋವಿಡ್ ಸಂಕಷ್ಟದಲ್ಲಿ 700 ಜನರಿಗೆ ಉದ್ಯೋಗ ನೀಡಿದ್ದಾರೆ. ಆರ್ಎಸ್ಎಸ್, ವಿಎಚ್ಪಿ, ಸೇವಾ ಭಾರತಿ ಸ್ವಯಂ ಸೇವಕರು ಹಳ್ಳಿಹಳ್ಳಿಗೂ ಜನರ ಕಲ್ಯಾಣ ಮಾಡುತ್ತಿದ್ದಾರೆ. ಹಸಿದವರಿಗೆ ಅನ್ನ ನೀಡುವ ಮೂಲಕ ಸರ್ಕಾರದ ಕಣ್ಣು ತೆರೆಸಿದ್ದಾರೆ ಎಂದರು.
ಕೇಂದ್ರ, ರಾಜ್ಯ ಸರ್ಕಾರ ಕರೊನಾ ಸಂಕಷ್ಟವನ್ನು ಸಮರ್ಥವಾಗಿ ಎದುರಿಸುತ್ತಿದೆ. ನವೆಂಬರ್ವರೆಗೆ 80 ಕೋಟಿ ಜನರಿಗೆ ಉಚಿತ ಪಡಿತರ, ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುತ್ತಿದೆ. ಪ್ರತಿ ಗ್ರಾಪಂಗೆ 50ಸಾವಿರ ರೂ. ನೀಡುತ್ತಿದ್ದು, ಇದರ ಜತೆ 14, 15ನೇ ಹಣಕಾಸು ಯೋಜನೆಯಡಿ ಉಳಿದ ಅನುದಾನ ಬಳಸಿಕೊಳ್ಳಲು ಆದೇಶಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 4-5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪಿಎಂಜೆವೈ ಯೋಜನೆಯಡಿ ಕನಿಷ್ಠ 30ಕಿಮೀ ರಸ್ತೆ ಅಭಿವೃದ್ಧಿ ಆದ್ಯತೆ ನೀಡಲಾಗಿದೆ ಎಂದರು.
ಶಾಸಕರಾದ ಕೆ.ಶಿವನಗೌಡ ನಾಯಕ, ಡಾ.ಶಿವರಾಜ ಪಾಟೀಲ್ ಇತರರಿದ್ದರು.
ರಾಜ್ಯದಲ್ಲಿ 6009 ಗ್ರಾಪಂಗಲ್ಲಿ 4800 ಪಿಡಿಒಗಳಿದ್ದಾರೆ. ನರೇಗಾದಡಿ ಕಳೆದ ವರ್ಷ 13 ಕೋಟಿ ಉದ್ಯೋಗ ಸೃಜನೆಗೆ ಕೇಂದ್ರ ಗುರಿ ನೀಡಿತ್ತು. ನಾವು 15ಕೋಟಿ ದಾಟಿದ್ದೇವೆ. 275ರೂ. ಕೂಲಿಯಂತೆ 800 ಕೋಟಿ ರೂ. ಬಿಡುಗಡೆ ಮಾಡಿತ್ತು. ಈ ವರ್ಷ 299ರೂ. ಕೂಲಿ ನಿಗದಿ ಮಾಡಿದ್ದು, 15 ಕೋಟಿಗೂ ಅಧಿಕ ಉದ್ಯೋಗ ಸೃಜಿಸುವ ಗುರಿಯಿದೆ. 100ದಿನ ಕೆಲಸ ಮುಗಿದ ನಂತರ ಹೆಚ್ಚಿಸಲು ಯೋಚಿಸಲಾಗುವುದು.
| ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ