ದೇವದುರ್ಗ: ಕೃಷ್ಣಾ ಅಚ್ಚುಕಟ್ಟು ಪ್ರಾಧಿಕಾರ ನೀರಾವರಿ ಸಲಹಾ ಸಮಿತಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದನ್ನು ಖಂಡಿಸಿ ಹಾಗೂ ಡಿ.1ರಿಂದ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ಹಮ್ಮಿಕೊಂಡಿದ್ದ ಹೆದ್ದಾರಿ ಸಂಚಾರ ತಡೆ ಹೋರಾಟವನ್ನು ಡಿ.2ಕ್ಕೆ ಮುಂದೂಡಲಾಗಿದೆ. ನ.29ರಂದು ಹೋರಾಟ ನಡೆಸಲು ನಿರ್ಧರಿಸಿದ್ದು, ಪೊಲೀಸರ ಮಧ್ಯಸ್ಥಿಕೆಯಿಂದಾಗಿ ಎರಡು ದಿನ ಮುಂದೂಡಲಾಗಿದೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖರೊಂದಿಗೆ ಪಿಐ ಕೆ.ಹೊಸಕೇರಪ್ಪ ಭಾನುವಾರ ಎರಡನೇ ಸುತ್ತಿನ ಮಾತುಕತೆ ನಡೆಸಿದರು. ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಎಸ್ಪಿ ಬಿ.ನಿಖಿಲ್, ನೀರಾವರಿ ಇಲಾಖೆ ಎಸ್ಇ ಎನ್.ಎಂ.ನಾಯಕ ಜತೆ ಫೋನಿನಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಇಂಗಳದಾಳ, ನಾಲೆಗೆ ಡಿ.1ರಿಂದ ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು. ಕೆಬಿಜೆಎನ್ಎಲ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಡಿ.1ರಂದು ನಾಲೆಗೆ ನೀರು ಹರಿಸಲಾಗುವುದು. ಡಿ.1ರವರೆಗೆ ಕಾಯ್ದು ನೋಡಿ ಎಂದು ಅಧಿಕಾರಿಗಳು ರೈತರಿಗೆ ಮನವಿ ಮಾಡಿದರು. ನೀರು ಹರಿಸದಿದ್ದರೆ ಡಿ.2ರಂದು ಸಿರವಾರ ಕ್ರಾಸ್ಬಳಿ ನಾಲೆಗೆ ನೀರು ಬಿಡುವವರೆಗೆ ಸಂಚಾರ ತಡೆ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.