ಅಧಿಕಾರಿಗಳ ನಿರ್ಲಕ್ಷೃ ಕಾರಣ ಎಂದ ಕೃಷಿಕರು
ದೇವದುರ್ಗ: ತಾಲೂಕಿನ ನಾಗೋಲಿ ಗ್ರಾಮದಲ್ಲಿ ನಾರಾಯಣಪುರ ಬಲದಂಡೆ ನಾಲೆ 95 ಕಿ.ಮೀ.ನಲ್ಲಿ ಬರುವ 17ನೇ ಲ್ಯಾಟ್ರಿನ್ನಲ್ಲಿ ಹೆಚ್ಚುವರಿ ನೀರು ರೈತರ ಜಮೀನಿಗೆ ನುಗ್ಗಿ ಬೆಳೆ ಹಾಳಾಗುತ್ತಿದೆ.
ಕೆಲ ದಿನಗಳಿಂದ ಉತ್ತಮ ಮಳೆ ಸುರಿದ ಕಾರಣ, ರೈತರಿಗೆ ನಾಲೆಯ ನೀರಿನ ಅಗತ್ಯ ಬಿದ್ದಿಲ್ಲ. ಇದರಿಂದ ನಾಲೆಗೆ ಬಿಟ್ಟ ನೀರು ಬಳಕೆಯಾಗದ ಕಾರಣ ಹೆಚ್ಚುವರಿ ನೀರು ನಾಲೆ ಕೊನೇ ಭಾಗಕ್ಕೆ ನುಗ್ಗಿದೆ. ಇದರಿಂದ ಭತ್ತ, ಹತ್ತಿ, ಮೆಣಸಿನಕಾಯಿ ಮತ್ತಿತರ ಬೆಳೆದ ಜಮೀನಲ್ಲಿ 2-3 ದಿನ ನೀರು ನಿಂತಿವೆ.
ಎನ್ಆರ್ಬಿ ನಾಲೆ 95ಕಿಮೀ ನಂತರ ಹೆಚ್ಚುವರಿ ನೀರನ್ನು ನದಿಗೆ ಹರಿಸಲು ಹಾಳ್ನಾಗಡದಿನ್ನಿ ಗ್ರಾಮದಲ್ಲಿ ಎಸ್ಕೇಪ್ ಗೇಟ್ ನಿರ್ಮಿಸಲಾಗಿದೆ. ಸದರಿ ಗೇಟ್ ಬಳಕೆಯಿಲ್ಲದ ಕಾರಣ ತುಕ್ಕು ಹಿಡಿದಿದೆ. ಈಗ ಅದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಲ್ಲದೇ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಎಸ್ಕೇಪ್ ಗೇಟ್ ಮೇಲೆತ್ತಿದ್ದರೆ ಹೆಚ್ಚುವರಿ ನೀರು ಜಮೀನಿಗೆ ನುಗ್ಗುತ್ತಿರಲಿಲ್ಲ. ಎಸ್ಕೇಪ್ ಗೇಟ್ ಜಾಮ್ ಆಗಿದ್ದರಿಂದ ಹೆಚ್ಚುವರಿ ನೀರು ನಿರಂತರವಾಗಿ ಹರಿದರೆ ಕಾಲುವೆ ಹಾಳಾಗಲಿದೆ ಎನ್ನುವ ದುರುದ್ದೇಶದಿಂದ ಅಧಿಕಾರಿಗಳೇ ಜೆಸಿಬಿಯಿಂದ ನಾಗೋಲಿಯಲ್ಲಿ ನಾಲೆ ಒಡೆದು ಹಳ್ಳಕ್ಕೆ ನೀರು ಹರಿಸಿದ್ದಾರೆ. ಇದರಿಂದ ತಮ್ಮ ರೈತರ ಜಮೀನಿಗೆ ನೀರು ನುಗ್ಗಿವೆ ಎಂದು ರೈತರು ಆರೋಪಿಸಿದ್ದಾರೆ. ಕೂಡಲೇ ರೈತರಿಗೆ ಪರಿಹಾರ ನೀಡಬೇಕು. ನಿರ್ಲಕ್ಷ್ಯವಹಿಸಿದರೆ ರಸ್ತೆ ಸಂಚಾರ ತಡೆ ನಡೆಸಲಾಗುವುದು ಎಂದು ರೈತ ಪಂಪಣ್ಣ ನಾಗೋಲಿ ಎಚ್ಚರಿಸಿದ್ದಾರೆ.
ಸತತ ಮಳೆ ಹಾಗೂ ನಾಲೆ ನೀರು ಹರಿದು ನಾಗೋಲಿ ಗ್ರಾಮದಲ್ಲಿ ರೈತರ ಜಮೀನಿಗೆ ನೀರು ನುಗ್ಗಿವೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಬೆಳೆ ಹಾನಿಯಾಗಿಲ್ಲ. ನಮ್ಮ ಇಲಾಖೆಯಿಂದ ಬೆಳೆಹಾನಿಗೆ ಪರಿಹಾರ ನೀಡಲು ಬರುವುದಿಲ್ಲ. ಇನ್ನೊಮ್ಮೆ ಹೀಗಾಗದಂತೆ ಎಚ್ಚರ ವಹಿಸಲಾಗುವುದು.
| ಅಮರೇಗೌಡ ಎನ್ಆರ್ಬಿಸಿ 17ನೇ ನಾಲೆ ಇಂಜಿನಿಯರ್