ಕೆಎಸ್ಎನ್ ದಾಸೋಹ ಕೇಂದ್ರಕ್ಕೆ ಭೇಟಿ
ದೇವದುರ್ಗ: ಕರೊನಾ ಸಂಕಷ್ಟದಲ್ಲಿ ಶಾಸಕ ಕೆ.ಶಿವನಗೌಡ ನಾಯಕ, ಅವರ ತಾಯಿ ಆಶಯದಂತೆ ಅನ್ನದಾಸೋಹ ಕೇಂದ್ರ ತೆರೆದು ಬಡವರಿಗೆ ಊಟ ನೀಡುತ್ತಿರುವುದು ಶ್ಲಾಘನೀಯ. ಉಳಿದ ಶಾಸಕರು ಇವರನ್ನು ಅನುಸರಿಸಿದರೆ, ಜನರ ಸಂಕಷ್ಟ ದೂರವಾಗಲಿದೆ ಎಂದು ಹಟ್ಟಿಚಿನ್ನದಗಣಿ ನಿಗಮದ ಅಧ್ಯಕ್ಷ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಕೆಎಸ್ಎನ್ ಅನ್ನದಾಸೋಹ ಕೇಂದ್ರಕ್ಕೆ ಭೇಟಿ ನೀಡಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಸಕ ಕೆ.ಶಿವನಗೌಡ ನಾಯಕ ಕಾರ್ಯ ಮಾದರಿಯಾಗಿದೆ. ಕ್ಷೇತ್ರದ ಪ್ರತಿ ಹಳ್ಳಿಗೆ ತಿಂಗಳ ಪರ್ಯಂತ ಊಟ, ಕುಡಿವ ನೀರು, ಮಾಸ್ಕ್, ಮೊಟ್ಟೆ ವಿತರಣೆ ಮಾಡುವುದು ಸುಲಭವಲ್ಲ. ಲಾಕ್ಡೌನ್ನಿಂದ ಜನರು ದುಡಿಮೆಯಿಲ್ಲದೆ ಸಂಕಷ್ಟ ಎದುರಿಸುತ್ತಿದ್ದು, ಜೀವನ ನಡೆಸುವುದು ಕಷ್ಟವಾಗಿದೆ. ಈ ಸಮಯದಲ್ಲಿ ಸಹಾಯ ಮಾಡಿದರೆ, ದೇವರು ಮೆಚ್ಚುತ್ತಾನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದು, ಲಾಕ್ಡೌನ್ನಿಂದ ಸಮಸ್ಯೆ ಎದುರಿಸುತ್ತಿರುವ ಬಡವರಿಗೆ ನ್ಯಾಯಬೆಲೆ ಅಂಗಡಿಯಿಂದ ಪಡಿತರ ನೀಡುತ್ತಿದ್ದಾರೆ. ಅಲ್ಲದೆ ಕರೊನಾ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಕರೊನಾ ಸಮಸ್ಯೆಯನ್ನು ಸರ್ಕಾರ ಸಮರ್ಥವಾಗಿ ಎದುರಿಸುತ್ತಿದೆ ಎಂದರು.
ಅನ್ನದಾಸೋಹ ಕೇಂದ್ರ ಪರಿಶೀಲನೆ ನಡೆಸಿ, ಉಪಾಹಾರ ಅವಲಕ್ಕಿ ಒಗ್ಗರಣೆ, ರೈಸ್ ಬಾತ್ ಸವಿದರು. ಶಾಸಕ ಕೆ.ಶಿವನಗೌಡ ನಾಯಕ, ಬಿಜೆಪಿ ಮುಖಂಡರಾದ ತ್ರಿವಿಕ್ರಮ ಜೋಷಿ, ಬಸವರಾಜ ಕೊಪ್ಪರ, ತಹಸೀಲ್ದಾರ್ ಮಧುರಾಜ್ ಯಾಳಗಿ, ಪಿಐ ಹನುಮಂತ ಸಣ್ಣಮನಿ, ಸಿಪಿಐ ಆರ್.ಎಂ.ನದಾಫ್ ಇತರರು ಇದ್ದರು.
ಸಿಎಂ ಪರಿಹಾರ ನಿಧಿಗೆ ರೂ. 5ಕೋಟಿ : ಕರೊನಾ ಸಂಕಷ್ಟ ಅರಿತು ಹಟ್ಟಿಚಿನ್ನದಗಣಿ ಕಂಪನಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 5ಕೋಟಿ ರೂ. ನೀಡಲಾಗಿದೆ. ಕಂಪನಿಯಿಂದ ಹಟ್ಟಿಯಲ್ಲಿ 100 ಬೆಡ್ಗಳ ಕೋವಿಡ್ ಕೇರ್ ಕೇಂದ್ರ ತೆರೆಯಲಾಗಿದೆ. 200 ಬೆಡ್ಗಳ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಜತೆಗೆ ಸಿಟಿ ಹಾಗೂ ಎಂಆರ್ಐ ಸ್ಕ್ಯಾನ್ ತೆರೆಯುವ ಯೋಚನೆಯಿದೆ. ಜಿಲ್ಲೆಯಲ್ಲಿ ಆಂಬುಲೆನ್ಸ್ ಕೊರತೆಯಿದ್ದು, ಕಂಪನಿಯಿಂದ ವಾಹನ ನೀಡಲಾಗುವುದು. ಚಿನ್ನದಗಣಿಗೆ ಸಹಕಾರ ನೀಡುತ್ತಿರುವ ಹೀರಾ, ಬುದ್ದಿನ್ನಿ, ಊಟಿ ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸಲಾಗುವುದು. ಕುಡಿವ ನೀರು, ಶಾಲಾ ಕಾಂಪೌಂಡ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದರು.