ದೇವದುರ್ಗ: ಬಾಕಿ ಇರುವ ಆರು ತಿಂಗಳ ವೇತನ ಪಾವತಿಸುವಂತೆ ಆಗ್ರಹಿಸಿ ಮಿನಿವಿಧಾನಸೌಧದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಪಟ್ಟಣದ ಬೃಂದಾವನ ಕಾಲನಿಯ ಎಸ್ಸಿ ಬಾಲಕರ ಪದವಿ ಪೂರ್ವ ಹಾಸ್ಟೆಲ್ನ ಅಡುಗೆ ಸಿಬ್ಬಂದಿ ಗುರುವಾರ ಟಿಕಾಣಿ ಹೂಡಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್ನಲ್ಲಿ ಅಡುಗೆ ಸಿಬ್ಬಂದಿ ಹಾಗೂ ಸಹಾಯಕರು ಹಲವು ತಿಂಗಳಿನಿಂದ ವೇತನವಿಲ್ಲದೆ ದುಡಿಯುತ್ತಿದ್ದಾರೆ. ಇದರಿಂದ ಜೀವನ ನಡೆಸುವುದು ಕಷ್ಟವಾಗಿದೆ. ವೇತನ ನೀಡುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಎಸ್ಸಿ ಬಾಲಕರ ಪದವಿ ಪೂರ್ವ ಕಾಲೇಜು ಪಟ್ಟಣದಿಂದ ನಾಲ್ಕೈದು ಕಿಮೀ ದೂರವಿದೆ. ಇಲ್ಲಿಂದ ನಡೆದು ಹೋಗಲು ಸಮಸ್ಯೆಯಾಗುತ್ತಿದೆ. ಈ ಮೊದಲಿದ್ದ ವಾರ್ಡನ್ ಹನುಮಂತ ಎನ್ನುವವರು ಖಾಸಗಿ ವಾಹನ ವ್ಯವಸ್ಥೆ ಮಾಡಿದ್ದರು. ಅವರ ನಂತರ ಬಂದ ವಾರ್ಡನ್ ಹಾಗೂ ಇಲಾಖೆ ಅಧಿಕಾರಿಗಳು ನಮ್ಮನ್ನು ಮರೆತ್ತಿದ್ದಾರೆ. ವೇತನವಾಗದ ಇಂಥ ಸಂದರ್ಭದಲ್ಲಿ ನಾವು ಖಾಸಗಿ ವಾಹನಗಳಿಗೆ ಹಣ ನೀಡಿ ಹೋಗುವುದು ಕಷ್ಟವಾಗಿದೆ ಎಂದು ಅಡುಗೆ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಬಾಕಿ ಇರುವ ಆರು ತಿಂಗಳ ವೇತನ ತಕ್ಷಣ ಬಿಡುಗಡೆ ಮಾಡಬೇಕು. ವಸತಿ ನಿಲಯಕ್ಕೆ ಹೋಗಿಬರಲು ವಾಹನ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಅಡುಗೆ ಸಿಬ್ಬಂದಿಯಾದ ಅಕ್ಕಮ್ಮ, ತಾಯಮ್ಮ, ಸಂಗಮ್ಮ, ರಾಮಲಿಂಗಮ್ಮ, ಮಲ್ಲಮ್ಮ, ಗುಂಡಮ್ಮ, ಪಾತಿಮಾ, ಶಿವಮ್ಮ ಇತರರಿದ್ದರು.
ಅಡುಗೆ ಸಿಬ್ಬಂದಿಗೆ ಜಿಲ್ಲಾದ್ಯಂತ ವೇತನ ಆಗಿಲ್ಲ. ಜಿಲ್ಲಾ ಇಲಾಖೆಯಿಂದ ವೇತನ ಬಿಡುಗಡೆಯಾಗಿದ್ದು, ಏಜೆನ್ಸಿಗೆ ಚೆಕ್ ನೀಡಿದ್ದೇವೆ. ಇನ್ನೆರಡು ದಿನಗಳಲ್ಲಿ ಸಿಬ್ಬಂದಿ ಬ್ಯಾಂಕ್ ಖಾತೆಗೆ ಐದು ತಿಂಗಳ ವೇತನ ಬಿಡುಗಡೆಯಾಗಲಿದೆ.
| ದೇವರಾಜ ಬಿಂಗಂ