ಅಮರೇಶ ಚಿಲ್ಕರಾಗಿ ದೇವದುರ್ಗ
ದುಡಿಯುವ ವರ್ಗದ ತುತ್ತಿನಚೀಲ ಕಸಿದಿದ್ದ ಮಹಾಮಾರಿ ಕರೊನಾ ಈಗ ನಿಧನವಾಗಿ ಇಳಿಕೆಯಾಗಿದೆ. ಅತ್ತ ಸರ್ಕಾರವೂ ಅನ್ಲಾಕ್ಗೆ ಚಾಲನೆ ನೀಡುತ್ತಿದ್ದಂತೆ ಇತ್ತ ಕೂಲಿಕಾರರು ಕೆಲಸ ಅರಸಿ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ.
ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾ ನದಿ ನೀರಿನಿಂದ ಬಹುತೇಕ ಭೂಪ್ರದೇಶ ನೀರಾವರಿಗೆ ಒಳಪಟ್ಟಿದ್ದರೂ ಜನರ ಗುಳೆ ತಪ್ಪಿಲ್ಲ. ಕೃಷಿ ಚಟುವಟಿಕೆಯಲ್ಲಿ ನಿರಂತರ ಕೆಲಸ ಸಿಗದಿರುವುದು ಗುಳೆಗೆ ಪ್ರಮುಖ ಕಾರಣ. ಲಾಕ್ಡೌನ್ನಲ್ಲಿ ಎರಡು ತಿಂಗಳು ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಜನರು, ಅನ್ಲಾಕ್ ಆಗುತ್ತಿದ್ದಂತೆ ಕುಟುಂಬ ಸಮೇತ ಗುಳೆ ಹೋಗುತ್ತಿದ್ದಾರೆ. ನಿತ್ಯ ನಾಲ್ಕೈದು ಸಾರಿಗೆ ಸಂಸ್ಥೆ ಬಸ್ಗಳು ಕೂಲಿಕಾರರನ್ನು ತುಂಬಿಕೊಂಡು ದೊಡ್ಡ ನಗರಗಳಿಗೆ ಪ್ರಯಾಣ ಬೆಳೆಸುತ್ತಿವೆ.
ಮಳೆಗಾಲ ಪ್ರಾರಂಭವಾಗಿದ್ದು ಕೃಷಿ ಚಟುವಟಿಕೆಗಳು ನಿಧಾನವಾಗಿ ಆರಂಭವಾಗಿವೆ. ಕೃಷ್ಣಾ ನದಿಗೆ ನೀರು ಬಿಟ್ಟಿದ್ದು ನದಿ ಅಕ್ಕಪಕ್ಕದ ಗ್ರಾಮಗಳಲ್ಲಿ ಒಕ್ಕಲುತನ ಆರಂಭವಾಗಿವೆ. ಜುಲೈ ಕೊನೇ ವಾರ ನೀರು ಬಿಡುವ ಸಾಧ್ಯತೆಯಿದ್ದು, ಅದಕ್ಕ್ಕೂ ಮುನ್ನವೇ ಜನರು ಗುಳೆ ಹೋಗುತ್ತಿದ್ದಾರೆ. ಇದರಿಂದ ಕೂಲಿಕಾರರ ಸಮಸ್ಯೆ ತೀವ್ರವಾಗಿ ಕಾಡಲಿದೆ.
ಎಲ್ಲಿಗೆ ಎಷ್ಟು ವಾಹನಗಳು?
ತಾಂಡಾ, ದೊಡ್ಡಿಯ ಬಹುತೇಕ ಜನರು ಕೆಲಸ ಅರಸಿ ಮುಂಬೈ, ಪುಣೆಗೆ ಗುಳೆ ಹೋಗುತ್ತಿದ್ದಾರೆ. ಇನ್ನು ಕೆಲವರು ಬೆಂಗಳೂರು, ಹೈದರಾಬಾದ್ಗೆ ತೆರಳುತ್ತಿದ್ದಾರೆ. ತಾಂಡಾ, ದೊಡ್ಡಿ ಕೂಲಿಕಾರರಿಗೆ ಪುಣೆ ಫೆವರೇಟ್ ಆಗಿದೆ. ಭಾಷೆ ಹಾಗೂ ವ್ಯವಹಾರಕ್ಕೆ ಅನುಕೂಲವಿದೆ. ದೇವದುರ್ಗ ಘಟಕದಿಂದ ನಿತ್ಯ ಬೆಂಗಳೂರಿಗೆ ನಾಲ್ಕು, ಪುಣೆಗೆ ಎರಡು, ಕೆಜಿಎಫ್ಗೆ ಒಂದು ಸೇರಿ ಬೇರೆ ಘಟಕದಿಂದ ದೇವದುರ್ಗ, ತಿಂಥಣಿ ಮಾರ್ಗವಾಗಿ ಹತ್ತಾರು ಬಸ್ಗಳು ಓಡುತ್ತಿವೆ. ನಿತ್ಯ ಸುಮಾರು 100ಕ್ಕೂ ಹೆಚ್ಚು ಕೂಲಿಕಾರರು ಗುಳೆ ಹೋಗುತ್ತಿದ್ದಾರೆ.
ಗುಳೆ ಹೋಗುವ ಜನರ ಸಂಖ್ಯೆ ನೋಡಿ ಬಸ್ ಓಡಿಸುತ್ತೇವೆ. ನಿತ್ಯ ಸುಮಾರು 100ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಬೇರೆ ಘಟಕದ ಹತ್ತಾರು ಬಸ್ಗಳು ತಾಲೂಕು ಮೂಲಕ ಹೋಗುತ್ತವೆ.
| ಸಿದ್ದಪ್ಪ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕ, ದೇವದುರ್ಗ