ಶಿವಮೊಗ್ಗ: ಶಿವಮೊಗ್ಗದಲ್ಲಿ ಗ್ಯಾಂಗ್ವಾರ್ಗಳು ನಡೆಯುವಷ್ಟು ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಲಷ್ಕರ್ ಮೊಹಲ್ಲಾದಲ್ಲಿ ಬುಧವಾರ ಸಂಜೆ ನಡೆದ ಗ್ಯಾಂಗ್ವಾರ್ ತಡೆಯುವಲ್ಲಿ ಬೇಜಾವಾಬ್ದಾರಿತನ ವಹಿಸಿದ ಕೋಟೆ ಠಾಣೆ ಇನ್ಸ್ಪೆಕ್ಟರ್ ಗುರು ಬಸವರಾಜ ಅವರನ್ನು ತಕ್ಷಣವೇ ಅಮಾನತು ಮಾಡಬೇಕು ಮತ್ತು ಎಸ್ಪಿ ಜಿ.ಕೆ.ಮಿಥುನ್ಕುಮಾರ್ ವಿರುದ್ಧವೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಗ್ರಹಿಸಿದರು.
ಶಾಂತಿ ನೆಲೆಸುತ್ತಿದ್ದ ಶಿವಮೊಗ್ಗದಲ್ಲಿ ಇದೀಗ ಗ್ಯಾಂಗ್ವಾರ್ಗಳು ನಡೆಯುತ್ತಿವೆ. ಅದರ ಬಗ್ಗೆ ಮಾಹಿತಿ ಇದ್ದರೂ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾದ ಪರಿಣಾಮ ಇಬ್ಬರ ಹತ್ಯೆಯಾಗಿದೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಈ ಕೃತ್ಯದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ಬೇಜವಾಬ್ದಾರಿತನ ಪ್ರದರ್ಶಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕೆ.ಆರ್.ಪುರಂನ ಸುಹೈಲ್ ಮತ್ತು ಅಣ್ಣಾನಗರದ ಗೌಸ್ ಮೃತಪಟ್ಟಿದ್ದಾರೆ. ಲಷ್ಕರ್ ಮೊಹಲ್ಲಾದ ಯಾಸಿನ್ ಖುರೇಶಿ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಯಾಸಿನ್ ಮೇಲೆ ಸುಹೈಲ್ ಮತ್ತು ಗೌಸ್ ಅಟ್ಯಾಕ್ಮಾಡಲು ಹೋಗುವುದು ಪೊಲೀಸ್ ಇಲಾಖೆಗೆ ಮುಂಚಿತವಾಗಿಯೇ ಮಾಹಿತಿ ಇತ್ತು. ಆದರೂ ಕೃತ್ಯವನ್ನು ತಡೆಯದೇ ಕೈಕಟ್ಟಿ ಕುಳಿತಿದ್ದಾರೆ. ಅದರಲ್ಲೂ ಕೋಟೆ ಠಾಣೆ ಇನ್ಸ್ಪೆಕ್ಟರ್ ನಿರ್ಲಕ್ಷೃ ಎದ್ದು ಕಾಣುತ್ತಿದೆ ಎಂದು ದೂರಿದರು.
ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಎಂಎಲ್ಸಿಗಳಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಸೂಡಾ ಮಾಜಿ ಅಧ್ಯಕ್ಷ ಎನ್.ಜೆ.ನಾಗರಾಜ್, ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಕೆ.ವಿ.ಅಣ್ಣಪ್ಪ, ನವುಲೆ ಕೆ.ಮಂಜುನಾಥ, ಚಂದ್ರಶೇಖರ ಸುದ್ದಿಗೋಷ್ಠಿಯಲ್ಲಿದ್ದರು.
ಸರ್ಕಾರದ ಕುಮ್ಮಕ್ಕಿನಿಂದ ಸಾಲು ಸಾಲು ಕೊಲೆ
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಶಿವಮೊಗ್ಗದಲ್ಲಿ ಸಾಲು ಸಾಲು ಕೊಲೆ ಆಗುತ್ತಿವೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆರೋಪಿಸಿದರು. ಶಿವಮೊಗ್ಗದಲ್ಲಿ ಕಾಂಗ್ರೆಸ್ ಸರ್ಕಾರದ ಅಣತಿಯಂತೆ ನಡೆದರೆ ಪರಿಣಾಮ ಸರಿಯಾಗಿರಲ್ಲ. ಗೃಹ ಸಚಿವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. 2022 ಏ. 27ರಂದು ಸಾವರ್ಕರ್ಗೆ ಸಂಬಂಧಿಸಿ ಶಿವಮೊಗ್ಗದಲ್ಲಿ ಒಂದು ಘಟನೆ ನಡೆಯಿತು. ಇಷ್ಟು ದಿನ ಸುಮ್ಮನಿದ್ದ ಪೊಲೀಸರು ಚುನಾವಣೆ ಸಂದರ್ಭದಲ್ಲಿ ಚಾರ್ಜ್ಶೀಟ್ ಹಾಕಿದ್ದಾರೆ. ಸಾಗರದಲ್ಲಿ ಒಬಿಸಿ ಮೋರ್ಚಾ ಅಧ್ಯಕ್ಷರ ಗಡಿ ಪಾರು ಮಾಡಿದ್ದಾರೆ. ತಲವಾರು ಹಿಡಿದು ಬಡಿದಾಡುವ ಅವರನ್ನು ಗಡಿಪಾರು ಮಾಡಬೇಕಾದ ಎಸ್ಪಿ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಒಸಿ ಬಿಡ್ಡರ್ಗಳಿಂದ ಹಫ್ತಾ ವಸೂಲಿ ದಂಧೆ ಹೆಚ್ಚಾಗಿದೆ ಎಂದು ಆರೋಪಿಸಿದರು.