ಬೆಂಗಳೂರು: ಒಂದು ದಿನದ ಹಿಂದಷ್ಟೇ, ಸತೀಶ್ ತಮ್ಮ ‘ವೈತರಣಿ’ ಚಿತ್ರದ ಶೀರ್ಷಿಕೆ ಬದಲಾಗಿದೆ ಎಂದು ಸೂಚನೆ ನೀಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಹಾಕಿ, ತಮ್ಮ ಚಿತ್ರದ ಹೊಸ ಹೆಸರು ಲಂಡನ್ ನಗರದ ಲೀಕ್ ಸ್ಟ್ರೀಟ್ನ ಗೋಡೆಗಳಲ್ಲಿ ಅಡಗಿದೆ ಎಂದು ಹಿಂಟ್ ಕೊಟ್ಟಿದ್ದರು. ಆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ ನೆಟ್ಟಿಗರು, ಅದರಲ್ಲಿ ದಸರಾ ಎಂಬ ಹೆಸರಿದ್ದಿದ್ದನ್ನು ಗಮನಿಸಿದ್ದರು. ಆ ಉತ್ತರ ಸರಿಯಾಗಿದ್ದು, ಚಿತ್ರಕ್ಕೆ ‘ದಸರಾ’ ಎಂಬ ಹೆಸರಿಡಲಾಗಿದೆ.
ಈ ಕುರಿತು ಮಾತನಾಡಿದ ಸತೀಶ್, ‘‘ವೈತರಣಿ’ ಎಂಬ ಹೆಸರು ಚೆನ್ನಾಗಿದೆಯಾದರೂ, ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟ ಎಂಬ ಕಾರಣಕ್ಕೆ ಹೆಸರು ಬದಲಾಯಿಸಿದ್ದೇವೆ. ಇಡೀ ಚಿತ್ರತಂಡ ಕೂತು ಚರ್ಚೆ ಮಾಡಿ, ‘ದಸರಾ’ ಎಂದು ಫೈನಲ್ ಮಾಡಿದ್ದೇವೆ’ ಎನ್ನುತ್ತಾರೆ. ಇದೊಂದು ಥ್ರಿಲ್ಲರ್ ಕಥೆ. ಇದರಲ್ಲಿ ಡಿಟೆಕ್ಟಿವ್ ಪಾತ್ರ ಮಾಡುತ್ತಿದ್ದಾರೆ ಸತೀಶ್.
ಇನ್ನುಳಿದಂತೆ ಶರ್ವಿುಳಾ ಮಾಂಡ್ರೆ, ರುಕ್ಮಿಣಿ ವಿಜಯಕುಮಾರ್ ಸಹ ನಟಿಸುತ್ತಿದ್ದಾರೆ. ‘ಕಹಿ’ ಖ್ಯಾತಿಯ ಅರವಿಂದ್ ಶಾಸ್ತ್ರಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಶೂಟಿಂಗ್ಗೆ ಅನುಮತಿ ಸಿಗುತ್ತಿದ್ದಂತೆ ಬೆಂಗಳೂರು, ಕಾರವಾರ, ಹೊನ್ನಾವರ ಸುತ್ತಮುತ್ತ ಚಿತ್ರೀಕರಣ ಮುಂದುವರೆಯಲಿದೆ. ಇಂದು ಸತೀಶ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ದಸರಾ ಫಸ್ಟ್ಲುಕ್, ‘ಗೋಧ್ರಾ’ ಚಿತ್ರದ ಟೀಸರ್ ಮತ್ತು ಸಾಕ್ಷ್ಯಚಿತ್ರವೊಂದು ಬಿಡುಗಡೆಯಾಗಲಿದೆ.