ಅಂಕೋಲಾ: ಪತ್ರಕರ್ತರೆಂದು ಹೇಳಿಕೊಂಡು ತಾಲೂಕಿನಲ್ಲಿ ವಿವಿಧ ಇಲಾಖೆಗಳಲ್ಲಿ ವಂಚಿಸುತ್ತಿರುವ ನಕಲಿ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪೊಲೀಸ್ ನಿರೀಕ್ಷಕರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಬಂದವರನ್ನು ಠಾಣೆಗೆ ಹೋಗುವ ದಾರಿ ಮಧ್ಯೆದಲ್ಲಿ ತಡೆದು ನಾವು ಪತ್ರಕರ್ತರು ಎಂದು ಹೇಳಿಕೊಂಡು ನಿಮ್ಮ ಸಮಸ್ಯೆ ಬಗೆಹರಿಸಿಕೊಡುತ್ತೇವೆ. ಏನೇ ಇದ್ದರೂ ನಮ್ಮ ಬಳಿ ಹೇಳಿ ಎಂದು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಮಾತುಕತೆ ನಡೆಸುತ್ತಾರೆ. ದೂರು ಕೊಡಲು ಬಂದವರ ಮೊಬೈಲ್ ಸಂಖ್ಯೆ ಪಡೆದು ಅವರಿಗೆ ಕಿರುಕುಳ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಜತೆಗೆ ತಾಲೂಕಿನಲ್ಲಿ ಇನ್ನೂ ಅನೇಕ ವ್ಯಕ್ತಿಗಳು ತಾವು ಪತ್ರಕರ್ತರೆಂದು ಹೇಳಿಕೊಂಡು ಆರ್ಟಿಐ ಅಡಿ ಮಾಹಿತಿ ಪಡೆದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಬೆದರಿಸಿ ಹಣ ಪಡೆಯುತ್ತಿದ್ದಾರೆ. ಆದ್ದರಿಂದ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪೊಲೀಸ್ ನಿರೀಕ್ಷಕ ಶ್ರೀಕಾಂತ ತೋಟಗಿ ಮನವಿ ಸ್ವೀಕರಿಸಿದರು. ಪಿಎಸ್ಐ ಉದ್ದಪ್ಪ ಧರೆಪ್ಪನವರ, ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಮೊರಬಾ, ಗೌರವಾಧ್ಯಕ್ಷ ರಾಘು ಕಾಕರಮಠ, ಪದಾಧಿಕಾರಿಗಳಾದ ವಾಸುದೇವ ಗುನಗಾ, ನಾಗರಾಜ ಮಂಜಗುಣಿ, ವಿಠ್ಠಲದಾಸ ಕಾಮತ, ಸುಭಾಶ ಕಾರೇಬೈಲ್, ಕೆ. ರಮೇಶ, ಮಾರುತಿ ಹರಿಕಂತ್ರ, ಅಕ್ಷಯ ನಾಯ್ಕ, ನಾಗರಾಜ ಜಾಂಬಳೇಕರ, ಇತರರು ಉಪಸ್ಥಿತರಿದ್ದರು.