ನವದೆಹಲಿ: ಎಲ್ಲೆಡೆ ಇಂದು ರಾತ್ರಿ ದೀಪಾವಳಿಯನ್ನು ಸಂಭ್ರಮಿಸಬೇಕು ಎಂಬ ಸಡಗರದಲ್ಲಿ ಬಹುತೇಕ ಮಂದಿ ಇದ್ದರೆ, ಇಲ್ಲೊಂದಿಷ್ಟು ಮಂದಿ ‘ಇವತ್ತು ರಾತ್ರಿ ಏನಾಗುತ್ತದೋ?’ ಎಂಬ ಆತಂಕದಲ್ಲಿ ಇದ್ದಾರೆ.
ಇಂಥದ್ದೊಂದು ಆತಂಕ ಉಂಟಾಗಲು ಕಾರಣ ವಾಯುಮಾಲಿನ್ಯ. ದೆಹಲಿಯಲ್ಲಿ ವಾಯು ಗುಣಮಟ್ಟ ಇನ್ನೂ ಬಡವಾಗೇ ಇದ್ದು, ದೀಪಾವಳಿ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಪಟಾಕಿ ಸಿಡಿದು ಹೊಗೆ ಪ್ರಮಾಣ ಹೆಚ್ಚಾದಲ್ಲಿ ವಾಯುಮಾಲಿನ್ಯ ಪ್ರಮಾಣ ಗಂಭೀರ ಮಟ್ಟಕ್ಕೆ ಹೋಗುವ ಚಿಂತೆ ಇಲ್ಲಿನ ಹವಾಮಾನ ತಜ್ಞರು ಸರ್ಕಾರಿ ಅಧಿಕಾರಿಗಳನ್ನು ಕಾಡತೊಡಗಿದೆ. ಭೂವಿಜ್ಞಾನ ಸಚಿವಾಲಯದ ಮಾಹಿತಿ ಪ್ರಕಾರ, ದೀಪಾವಳಿ ಸಂದರ್ಭ ಪಟಾಕಿ ಸಿಡಿಸದೇ ಇದ್ದರೆ ದೆಹಲಿಯಲ್ಲಿನ ಗಾಳಿಯಲ್ಲಿನ ಪಿಎಂ ಕಣಗಳ ಕಾನ್ಸೆಂಟ್ರೇಷನ್ ಕಳೆದ ನಾಲ್ಕು ವರ್ಷಗಳಲ್ಲೇ ಕಡಿಮೆ ಎಂದರೆ 2.5 ಇರಲಿದೆ ಎಂದು ಅಂದಾಜಿಸಿದೆ.
ಆದರೆ ಪಟಾಕಿ ಹೊಗೆ ಹಾಗೂ ಕೂಳೆ ಸುಟ್ಟ ಹೊಗೆ ಎರಡೂ ವಾಯಮಾಲಿನ್ಯ ಹೆಚ್ಚಾಗಿಸುವ ಆತಂಕ ಅಧಿಕಾರಿಗಳನ್ನು ಕಾಡುತ್ತಿದೆ. ಅಲ್ಲದೆ ಗಾಳಿ ಬೀಸುವಿಕೆಯ ದಿಕ್ಕು ಕೂಡ ಅದಕ್ಕೆ ಪೂರಕವಾಗಿದೆ. ಮತ್ತೊಂದೆಡೆ ದೆಹಲಿಯಲ್ಲಿನ ಏರ್ ಕ್ವಾಲಿಟಿ ಇಂಡೆಕ್ಸ್ ಗುರುವಾರ 314, ಶುಕ್ರವಾರ 339 ಇದ್ದಿದ್ದು ಶನಿವಾರ ಬೆಳಗ್ಗೆ 9ರ ಸುಮಾರಿಗೆ 369ಕ್ಕೆ ತಲುಪಿದೆ. ಕಳೆದ ದೀಪಾವಳಿಯಲ್ಲಿ ಅಂದರೆ ಅಕ್ಟೋಬರ್ 27ರಂದು 24 ಗಂಟೆಗಳ ಸರಾಸರಿ ಎಕ್ಯೂಐ 337 ಇತ್ತು. ನಂತರದ ಎರಡು ದಿನಗಳಲ್ಲಿ ಅದು 368 ಮತ್ತು 400ಕ್ಕೆ ತಲುಪಿ, ಮೂರು ದಿನಗಳಲ್ಲಿ ವಾಯುಮಾಲಿನ್ಯ ಪರಿಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಆತಂಕ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)