ನವದೆಹಲಿ: ಮೂವರು ಮಕ್ಕಳು ಸೇರಿ ದಂಪತಿಯ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ನಡೆದಿದೆ.
ನಾಲ್ಕು ದಿನಗಳ ಹಿಂದೆಯೇ ದೆಹಲಿಯ ಭಜನ್ಪುರದಲ್ಲಿರುವ ಮನೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಮೃತದೇಹಗಳು ಕೊಳೆಯುವ ಆರಂಭದ ಹಂತದಲ್ಲಿಯೇ ಪತ್ತೆಯಾಗಿವೆ.
ತುಂಬಾ ದರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಯವರು ಅನುಮಾನಗೊಂಡು ಪೊಲೀಸರಿಗೆ ಇಂದು ಬೆಳಗ್ಗೆ 11.30ರ ಸುಮಾರಿಗೆ ದೂರವಾಣಿ ಮೂಲಕ ಮಾಹಿತಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯ ಒಳಗಿನಿಂದ ಲಾಕ್ ಆಗಿದ್ದನ್ನು ಗಮನಿಸಿ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಮೃತದೇಹಗಳನ್ನು ನೋಡಿ ಶಾಕ್ ಆಗಿದ್ದಾರೆ.
ಆಟೋ ಚಾಲಕನಾಗಿದ್ದ ಶಂಭು(43) ಈಶಾನ್ಯ ದೆಹಲಿಯಿಂದ ಭಜನ್ಪುರಕ್ಕೆ ಕಳೆದ ಆರು ತಿಂಗಳ ಹಿಂದೆ ಪತ್ನಿ ಸುನಿತಾರೊಂದಿಗೆ ಮನೆ ಸ್ಥಳಾಂತರ ಮಾಡಿದ್ದರು. ದಂಪತಿಗೆ 16 ವರ್ಷದ ಮಗಳು ಮತ್ತು 14 ಹಾಗೂ 12 ವರ್ಷದ ಗಂಡು ಮಕ್ಕಳಿದ್ದರು.
ಬಲವಂತವಾಗಿ ಬಾಗಿಲು ಮುರಿದು ದರೋಡೆ ಮಾಡಿದ್ದಾರೆ ಎಂಬ ಯಾವುದೇ ಸುಳಿವು ಇಲ್ಲದಿರುವುದರಿಂದ ಇದೊಂದು ಆತ್ಮಹತ್ಯೆ ಎಂದು ದೆಹಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)