ರಾಯ್ಪುರ್ : ಕರೊನಾ ನಿಯಮ ಉಲ್ಲಂಘಿಸಿದ ಯುವಕನೊಂದಿಗೆ ದುರ್ವ್ಯವಹಾರ ನಡೆಸಿದ ಛತ್ತೀಸಗಢದ ಸೂರಜ್ಪುರದ ಜಿಲ್ಲಾಧಿಕಾರಿ ರಣಬೀರ್ ಶರ್ಮ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ರಾಜ್ಯದ ಸಿಎಂ ಭೂಪೇಶ್ ಬಘೇಲ್ ಅವರು ಈ ಆದೇಶ ಹೊರಡಿಸಿದ್ದಾರೆ. ಮತ್ತೊಬ್ಬ ಐಎಎಸ್ ಅಧಿಕಾರಿ ಗೌರವ್ ಕುಮಾರ್ ಸಿಂಗ್ ಅವರನ್ನು ಸೂರಜ್ಪುರದ ಹೊಸ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.
ರಣಬೀರ್ ಶರ್ಮ ಅವರು, ಲಾಕ್ಡೌನ್ ನಡುವೆ ಕೆಲ ಔಷಧಿಗಳನ್ನು ತರಲು ಮನೆಯಿಂದ ಹೊರಬಂದಿದ್ದ ಎನ್ನಲಾದ ಯುವಕನ ಮೊಬೈಲ್ ಪಡೆದು ಜೋರಾಗಿ ನೆಲಕ್ಕೆ ಎಸೆದು ಒಡೆದು ಹಾಕಿದ್ದರು. ಅಷ್ಟೇ ಅಲ್ಲ, ಕಪಾಳಕ್ಕೆ ಬಾರಿಸಿ, ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಅವನನ್ನು ಥಳಿಸುವಂತೆ ಹೇಳಿದ್ದರು. ಎಫ್ಐಆರ್ ಕೂಡ ದಾಖಲಿಸಲು ಆದೇಶಿಸಿದ್ದರು. ಇದೆಲ್ಲದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಿಲ್ಲಾಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ಐಎಎಸ್ ಅಸೋಸಿಯೇಷನ್ ಸಹ ಈ ಕೃತ್ಯವನ್ನು ಖಂಡಿಸಿತ್ತು.
ಇದನ್ನೂ ಓದಿ: ಯುವಕನ ಮೊಬೈಲ್ ಒಡೆದು ಕಪಾಳಕ್ಕೆ ಬಾರಿಸಿದ ಜಿಲ್ಲಾಧಿಕಾರಿ: ಜನರ ಆಕ್ರೋಶಕ್ಕೆ ಡಿಸಿ ಉತ್ತರ ಹೀಗಿದೆ…
ವಿಡಿಯೋ ವೈರಲ್ ಆದ ಬೆನ್ನಲ್ಲೇ, ಛತ್ತೀಸಘಡ ಸಿಎಂ ಭೂಪೇಶ್ ಬಘೇಲ್ ಅವರು ಈ ಘಟನೆಯನ್ನು ಖಂಡಿಸಿ, ಈ ರೀತಿಯ ವರ್ತನೆಗಳನ್ನು ರಾಜ್ಯದಲ್ಲಿ ಸಹಿಸಿಕೊಳ್ಳುವುದಿಲ್ಲ. ಸಂಬಂಧಿತ ಅಧಿಕಾರಿಯನ್ನು ಕೂಡಲೇ ಅವರ ಹುದ್ದೆಯಿಂದ ತೆಗೆಯಲಾಗುವುದು ಎಂದು ಟ್ವೀಟ್ ಮಾಡಿದ್ದರು.
ಈ ನಡುವೆ ರಣಬೀರ್ ಶರ್ಮ ಅವರು ತಮ್ಮ ನಡವಳಿಕೆ ಬಗ್ಗೆ ಕ್ಷಮೆ ಕೋರಿದ್ದಾರೆ. ಆದರೆ ಯುವಕನು ಉದ್ಧಟವಾಗಿ ನಡೆದುಕೊಂಡ ಎಂದು ದೂರಿದ್ದಾರೆ. “ಯುವಕನ ಉದ್ಧಟತನದ ವರ್ತನೆಯಿಂದಾಗಿ ನಾನು ಆಕ್ರೋಶಗೊಂಡು ಅವನ ಕಪಾಳಕ್ಕೆ ಹೊಡೆದೆ” ಎಂದು ಶರ್ಮ ವಿವರಣೆ ನೀಡಿದ್ದಾರೆ. (ಏಜೆನ್ಸೀಸ್)
‘ಅಮ್ಮ ಬಿಟ್ಟು ಹೋದರು… ಅವರ ನೆನಪುಗಳನ್ನು ಉಳಿಸಿಕೊಡಿ’; ಬಾಲಕಿಯ ಈ ಮನವಿ ಕರುಳುಹಿಂಡುವಂಥದ್ದು !
ಕುಡಿದ ಮತ್ತಿನಲ್ಲಿ ಮೀನುಗಾರರು ; ನಡುರಾತ್ರಿ ದಡಕ್ಕೆ ಅಪ್ಪಳಿಸಿದ ದೋಣಿ