ಮಂಚೇನಹಳ್ಳಿ: ಹೋಬಳಿಯ ಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಗಳ ಕಡೆ ಕಾರ್ಯಕ್ರಮದಡಿ ಜಿಲ್ಲಾಡಳಿತ ವಾಸ್ತವ್ಯ ಹೂಡಿ, ಫಲಾನುಭವಿಗಳಿಗೆ ಸರ್ಕಾರಿ ಸವಲತ್ತುಗಳನ್ನು ಒದಗಿಸುವುದರ ಜತೆಗೆ ಸಮಸ್ಯೆಗಳನ್ನು ಆಲಿಸಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಸೇರಿ ಹಲವರು ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪುರ ಗ್ರಾ.ಪಂ.ವ್ಯಾಪ್ತಿಯಲ್ಲಿ 500 ಲಾನುಭವಿಗಳಿಗೆ ಆಯುಷ್ಮಾನ್ ಭಾರತ್, 10 ಮಕ್ಕಳಿಗೆ ಕನ್ನಡಕ, ಪಿಎಂ ಕಿಸಾನ್ ಯೋಜನೆಯಡಿ 122 ಮಂಜೂರಾತಿ ಆದೇಶ ಪತ್ರ, ಭಾಗ್ಯಲಕ್ಷ್ಮೀ ಬಾಂಡ್ 212, ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಯಡಿ 178 ಮಂದಿಗೆ ಲಾಭವಿಗಳಿಗೆ ಸವಲತ್ತು, 6 ಅಂತರ್ಜಾತಿ ವಿವಾಹಿತ ದಂಪತಿಗೆ ಪ್ರೋತ್ಸಾಹ ಧನ,44 ಮಂದಿಗೆ ಸಾಗುವಳಿ ಚೀಟಿ, ಸಾಮಾಜಿಕ ಭದ್ರತೆ ಯೋಜನೆಯಡಿ 122 ಮಂದಿಗೆ ಮಾಸಾಶನ ಸೇರಿ 2916 ಮಂದಿ ಫಲಾನುಭವಿಗಳಿಗೆ ಹಲವು ಸವಲತ್ತುಗಳನ್ನು ವಿತರಿಸಲಾಯಿತು. ಸ್ಮಶಾನಕ್ಕೆ ರಸ್ತೆ ಕಾಮಗಾರಿ ಮತ್ತು ವಸತಿ ನಿವೇಶನಕ್ಕೆ ಹೋಗುವ ರಸ್ತೆ ಕಾಮಗಾರಿ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.