ಬೆಂಗಳೂರು: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ನಂತರ 48 ದಿನಗಳ ಮಂಡಲೋತ್ಸವ ಪೂರ್ಣಗೊಳಿಸಿ ಆಗಮಿಸುತ್ತಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಭವ್ಯ ಪುರಪ್ರವೇಶ ಸ್ವಾಗತ ಹಾಗೂ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಪೇಜಾವರದ ಶ್ರೀ ವಿಶ್ವಪ್ರಸನ್ನ ತೀರ್ಥರ ಅಭಿನಂದನಾ ಸಮಿತಿ ಮಾರ್ಚ್ 14ರಂದು ಸಂಜೆ 3.30ಕ್ಕೆ ನಗರದ ಪಿಇಎಸ್ ಕಾಲೇಜು ಸಮೀಪದ ನೈಸ್ ರಸ್ತೆಯ ಟೋಲ್ ಬಳಿಯಿಂದ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದವರೆಗೆ ಬೈಕ್ ರ್ಯಾಲಿ ನಡೆಸಲಿದೆ. 5 ಗಂಟೆಗೆ ದೊಡ್ಡ ಗಣಪತಿ ದೇವಸ್ಥಾನದಿಂದ ಪೂರ್ಣಪ್ರಜ್ಞಾ ವಿದ್ಯಾಪೀಠದವರೆಗೆ ಶ್ರೀರಾಮ-ರಾಮಾಯಣಗಳ ಜತೆ ಸ್ವಾಮೀಜಿಯ ಶೋಭಾ ಯಾತ್ರೆ ಹಾಗೂ 6 ಗಂಟೆಗೆ ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ಅಭಿವಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಮಿತಿ ಕಾರ್ಯದರ್ಶಿ ಅನಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಬೇಲಿಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ, ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಅರವಿಂದ ಲಿಂಬಾವಳಿ ಪಾಲ್ಗೊಳ್ಳಲಿದ್ದಾರೆ.
‘ರಾಮಮಂದಿರದಿಂದ ರಾಮರಾಜ್ಯದೆಡೆಗೆ’ಎಂಬ ಪೇಜಾವರ ಶ್ರೀಗಳ ಆಶಯದಂತೆ ಕಾರ್ಯಕ್ರಮದಲ್ಲಿ ಶಿಕ್ಷಣ, ಆರೋಗ್ಯ, ಗೋಸೇವೆ ಮುಂತಾದ ಕ್ಷೇತ್ರಕ್ಕೆ ಸಂಬಂಧಿಸಿ ಸಮಾಜಸೇವೆ ನಡೆಯಲಿದೆ. ಪೂರ್ಣಪ್ರಜ್ಞಾ ವಿದ್ಯಾಪೀಠದ ಪ್ರಾಂಶುಪಾಲ ಡಾ.ಎಚ್.ಸತ್ಯನಾರಾಯಣ ಆಚಾರ್ಯ ‘ಅಯೋಧ್ಯಾ ಮಂಡಲೋತ್ಸವ’ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ ಎಂದರು. ಸಮಿತಿ ಕಾರ್ಯದರ್ಶಿ ತಿರುಮಲಾಚಾರ್ಯ ಇತರರು ಸುದ್ದಿಗೋಷ್ಠಿಯಲ್ಲಿದ್ದರು.