ಮುಂಬೈ: ಇತ್ತೀಚೆಗಷ್ಟೇ ಪೊಲೀಸರಿಂದ ಬಂಧಿತನಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತನಾಗಿದ್ದ ಇಜಾಜ್ ಲಕ್ಡಾವಾಲಾ ಕೆಲವು ಪ್ರಮುಖ ಮಾಹಿತಿಗಳನ್ನು ವಿಚಾರಣೆ ವೇಳೆ ನೀಡಿದ್ದಾನೆ.
ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಇ ತೊಯ್ಬಾ ಉಗ್ರಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬನಾದ ಹಫೀಜ್ ಸೈಯದ್ಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಣಕಾಸು ಸಹಕಾರ ಸೇರಿ ಹಲವು ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದ ಎಂಬ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ದಾವೂದ್ ಇಬ್ರಾಹಿಂನನ್ನು ಭೇಟಿ ಮಾಡಲು ಆತನ ಕರಾಚಿಯಲ್ಲಿರುವ ಮನೆಗೆ ಪಾಕಿಸ್ತಾನ ಸೇನೆಯ ಪ್ರಮುಖ ಉನ್ನತಾಧಿಕಾರಿಗಳು ಬರುತ್ತಿದ್ದರು. ಹಫೀಜ್ ಸೈಯದ್ ಸೇರಿ ಹಲವರಿಗೆ ದಾವೂದ್ ಹಣಕಾಸು ಸಹಕಾರ ನೀಡುತ್ತಿದ್ದ. ಅಷ್ಟೇ ಅಲ್ಲದೆ ಅನೇಕ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದ ಎಂಬುದು ಅವರಿಂದಲೇ ನನಗೆ ತಿಳಿದಿದೆ ಎಂದು ಇಜಾಜ್ ಹೇಳಿದ್ದಾನೆ.
ದಾವೂದ್ ಬೋಗಸ್ ಕಂಪನಿಗಳ ದೊಡ್ಡ ಜಾಲವನ್ನೇ ಹೊಂದಿದ್ದ. ಮುಂಬೈ, ಬೆಂಗಳೂರು, ದುಬೈ, ಲಂಡನ್ಗಳಲ್ಲಿ ವಿವಿಧ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದ ಎಂದು ಮಾಹಿತಿ ನೀಡಿದ್ದಾನೆ.
ಕಾನೂನು ಬಾಹಿರ ಉದ್ಯಮಗಳಿಂದಲೇ ದಾವೂದ್ಗೆ ಹೆಚ್ಚಿನ ಪ್ರಮಾಣದ ಆದಾಯ ಬರುತ್ತಿತ್ತು. ಆ ಹಣದಲ್ಲಿ ಹೆಚ್ಚಿನ ಪಾಲನ್ನು ಭಯೋತ್ಪಾದನಾ ಸಂಘಟನೆಗಳಿಗಾಗಿ ಕೆಲಸ ಮಾಡುತ್ತಿರುವ ಎನ್ಜಿಒಗಳಿಗೆ ನೀಡುತ್ತಿದ್ದ ಎಂದು ಹೇಳಿದ್ದಾನೆ.
ದಾವೂದ್ಗೆ ನೇಪಾಳ ಹಾಗೂ ಬಾಂಗ್ಲಾದೇಶದಲ್ಲಿ ಬಲಿಷ್ಠ ನೆಲೆಯಿದೆ. ಗಡಿಯಾಚೆಗೆ ಮಾದಕ ವಸ್ತು ಸಾಗಣೆ ಮತ್ತು ನಕಲಿ ಕರೆನ್ಸಿ ಅಕ್ರಮ ಮಾರಾಟಗಳಿಗೆ ಈ ನೆಲೆಗಳೇ ಮೂಲ ಎಂದು ಹೇಳಲಾಗಿದೆ.(ಏಜೆನ್ಸೀಸ್)