More

    ಸದೃಢ ಸರ್ಕಾರಕ್ಕಾಗಿ ಮತದಾನ ಅಗತ್ಯ  ಯೋಗ ಶಿಬಿರದಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್  ಹೇಳಿಕೆ

    ದಾವಣಗೆರೆ: ಯೋಗಾಭ್ಯಾಸ ಒತ್ತಡಮುಕ್ತ ಬದುಕಿಗೆ ಸಹಕಾರಿಯಾದರೆ, ಪ್ರತಿಯೊಬ್ಬರೂ ಮತದಾನದಲ್ಲಿ ಭಾಗಿಯಾಗುವುದು ಸದೃಢ ಸರ್ಕಾರ ರಚನೆಗೆ ಕಾರಣವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
    ನಗರದ ಆಫೀಸರ್ಸ್ ಕ್ಲಬ್ನಲ್ಲಿ ಸೋಮವಾರ ಲೋಕಸಭಾ ಚುನಾವಣಾ ಮತದಾರರ ಜಾಗೃತಿ ಅಂಗವಾಗಿ ಆಯೋಜಿಸಿದ್ದ ಯೋಗ ತರಬೇತಿ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮತದಾರರ ಜಾಗೃತಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
    ಯೋಗ ಮತ್ತು ಮತದಾನ ನಾಗರಿಕರ ಕ್ರಿಯಾಶೀಲತೆ ಹೆಚ್ಚಿಸುತ್ತದೆ. ಪ್ರತಿ ಮತವೂ ಅಮೂಲ್ಯ, ಶ್ರೇಷ್ಠ ಹಾಗೂ ಶಕ್ತಿಯುತವಾದದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕೆಲವು ಕಡೆ ಶೇ. 90 ರಷ್ಟು ಮತದಾನವಾಗಿದ್ದರೆ, ಕೆಲವೆಡೆ ಶೇ.20 ರಷ್ಟು ಮತದಾನವಾಗಿದೆ. ಏಕೆ ಇಷ್ಟೊಂದು ವ್ಯತ್ಯಾಸವಾಗಿದೆ ಎಂದು ನಾಗರಿಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
    ಚುನಾವಣೆಯಲ್ಲಿ ಹೆಚ್ಚು ಮತದಾನವಾದಾಗ ಸಮರ್ಥ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಎಲ್ಲರೂ ಮತದಾನ ಹಬ್ಬದಲ್ಲಿ ಭಾಗಿಯಾಗುವ ಮೂಲಕ ಪ್ರಜಾಪ್ರಭುತ್ವದ ಗೆಲುವಿಗೆ ಶ್ರಮಿಸಬೇಕು. ಮತದಾನದಲ್ಲಿ ಹಿರಿಯ ನಾಗರಿಕರು, ಯುವ ಮತದಾರರು ಸೇರಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
    ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹೆಚ್ಚಿನ ಮತದಾನ ಅತ್ಯವಶ್ಯಕ. ಈ ಬಾರಿ ಮತದಾರರ ಚೀಟಿಯಲ್ಲಿ ಮತಗಟ್ಟೆಯ ಕ್ಯೂ.ಆರ್.ಕೋಡ್ ಸಹ ಒಳಗೊಂಡಿರುತ್ತದೆ. ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಇದರಿಂದ ಯಾವುದೇ ಗೊಂದಲ, ಸ್ಥಳದ ವಿಳಾಸ ಅರಿಯಲು ಸಮಸ್ಯೆಯಾಗುವುದಿಲ್ಲ. ಆರೋಗ್ಯಯುತ ಪ್ರಜಾಪ್ರಭುತ್ವಕ್ಕೆ ಮತದಾನವೇ ಆಸರೆಯಾಗಿದ್ದು, ಎಲ್ಲರೂ ಮತದಾನದಲ್ಲಿ ತಪ್ಪದೇ ಭಾಗವಹಿಸಬೇಕೆಂದು ತಿಳಿಸಿದರು.
    ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಪಾಲಿಕೆ ಆಯುಕ್ತೆ ರೇಣುಕಾ, ಆಫೀಸರ್ಸ್ ಕ್ಲಬ್ ಕಾರ್ಯದರ್ಶಿ ಡಾ. ಚಂದ್ರಶೇಖರ್ ಸುಂಕದ್, ಖಜಾಂಚಿ ಡಾ. ಮುರುಳೀಧರ್, ಯೋಗ ಗುರುಗಳಾದ ಪರಶುರಾಮ್, ಮಹದೇವಪ್ಪ, ಅನಿಲ್ ರಾಯ್ಕರ್ ಇದ್ದರು. ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts