More

    ವೀಕೆಂಡ್ ಕರ್ಫ್ಯೂಗೆ ದಾವಣಗೆರೆ ಜಿಲ್ಲೆ ಸ್ತಬ್ಧ

    ದಾವಣಗೆರೆ: ವೀಕೆಂಡ್ ಕರ್ಫ್ಯೂಗೆ ಶನಿವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇಡೀ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು.

    ಬೆಳಗ್ಗೆ 6ರಿಂದ 10 ಗಂಟೆಯ ವರೆಗೆ ಅಗತ್ಯ ವಸ್ತುಗಳಾದ ತರಕಾರಿ, ಹಾಲು, ಮಾಂಸ, ದಿನಸಿ ಪದಾರ್ಥಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಆ ಅವಧಿ ಮುಗಿಯುವ ಹೊತ್ತಿಗೆ ಅಧಿಕಾರಿಗಳು ಬೀದಿಗಿಳಿದು ಅಂಗಡಿಗಳನ್ನು ಬಂದ್ ಮಾಡಿಸಿದರು.

    ಕೆಎಸ್ಸಾರ್ಟಿಸಿಯ ಬಸ್ ನಿಲ್ದಾಣದಲ್ಲಿ ಬಸ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ನಿಂತಿದ್ದವು. ಆದರೆ, ಪ್ರಯಾಣಿಕರ ಕೊರತೆಯಿಂದಾಗಿ ಸೀಟುಗಳು ಭರ್ತಿಯಾಗುವ ವರೆಗೆ ಚಾಲಕರು, ನಿರ್ವಾಹಕರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಶೇ. 50 ರಷ್ಟು ಸೀಟುಗಳನ್ನು ತುಂಬಲು ಅವಕಾಶವಿತ್ತಾದರೂ ಶೇ. 10ರಷ್ಟು ಕೂಡಾ ಭರ್ತಿಯಾಗಲಿಲ್ಲ. ‘ಹರಿಹರಕ್ಕೆ ಹೋಗಲು ಒಂದು ಗಂಟೆಯಿಂದ ಕಾಯುತ್ತಿದ್ದೇವೆ, 10 ಜನ ಪ್ರಯಾಣಿಕರೂ ಬಂದಿಲ್ಲ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

    ಚಿಗಟೇರಿ ಜಿಲ್ಲಾಸ್ಪತ್ರೆಯ ಬಳಿ ರೋಗಿಗಳು ಬಸ್ ಮತ್ತು ಆಟೋಗಳಿಗೆ ಕಾಯುವ ದೃಶ್ಯ ಕಂಡುಬಂದಿತು. ಜನಸಂಚಾರ ತಡೆಯುವ ಉದ್ದೇಶದಿಂದ ರಸ್ತೆಯಲ್ಲಿ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.

    ತಹಸೀಲ್ದಾರ್ ಬಿ.ಎನ್.ಗಿರೀಶ್ ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗಿಳಿದರು. ಎಪಿಎಂಸಿ ಮಾರುಕಟ್ಟೆಗೆ ರಜೆ ಘೋಷಿಸಿದ್ದರೂ ಕೂಡಾ ತರಕಾರಿ ಚಿಲ್ಲರೆ ಮಾರಾಟ ನಡೆಯುತ್ತಿದ್ದುದನ್ನು ಗಮನಿಸಿ ವಹಿವಾಟು ಬಂದ್ ಮಾಡಿಸಿದರು. ಬಾಳೆಮಂಡಿಗಳನ್ನು ಮುಚ್ಚಿಸಿದರು.

    ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಸದಾ ಜನಸಂದಣಿಯಿಂದ ಕೂಡಿರುತ್ತಿದ್ದ ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ, ವಿಜಯಲಕ್ಷ್ಮಿ ರಸ್ತೆ, ಕಾಳಿಕಾದೇವಿ ರಸ್ತೆ, ಪಿ.ಬಿ. ರೋಡ್, ಅಶೋಕ ರಸ್ತೆ, ಹದಡಿ ರಸ್ತೆಗಳು ಬಿಕೋ ಎನ್ನುತ್ತಿದ್ದವು.

    ಜನರು ಮನೆಯಲ್ಲೇ ಲಾಕ್ ಆಗಿದ್ದರು. ಆದರೂ ಅಲ್ಲಲ್ಲಿ ಕೆಲವರು ವಾಹನಗಳಲ್ಲಿ ಓಡಾಡುವವರು ಹಾಗೂ ಪಾದಚಾರಿಗಳು ಕಂಡುಬಂದರು. ಅಗತ್ಯ ಕೆಲಸವಿದ್ದರೆ ಮಾತ್ರ ಹೊರಗೆ ಬರಲು ಅವಕಾಶವಿತ್ತು, ಅನವಶ್ಯಕವಾಗಿ ಬಂದವರನ್ನು ಅಲ್ಲಲ್ಲಿ ನಿಂತಿದ್ದ ಪೊಲೀಸರು ತಡೆದು ವಿಚಾರಿಸಿದರು, ಎಚ್ಚರಿಕೆ ನೀಡಿದರು, ದಂಡ ವಿಧಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts