ದಾವಣಗೆರೆ: ಚೆನ್ನೈನ ಐಐಟಿಯವರು ಅಭಿವೃದ್ಧಿಪಡಿಸಿರುವ ಮಾದರಿಯಲ್ಲಿ ಸ್ಟಾರ್ಟಪ್ ಪಾರ್ಕ್ ಅನ್ನು ದಾವಣಗೆರೆಯಲ್ಲಿ ಮಾಡಲಾಗುವುದು ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ವಿದ್ಯಾಶಂಕರ್ ಹೇಳಿದರು.
ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ‘ಚೈತ್ರ-2023’ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇಲ್ಲಿನ ನೂತನ್ ಕಾಲೇಜು ಪಕ್ಕದ 8 ಎಕರೆ ಪ್ರದೇಶದಲ್ಲಿ ಸ್ಟಾರ್ಟಪ್ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು.
ಚೆನ್ನೈನ ಸ್ಟಾರ್ಟಪ್ ಪಾರ್ಕ್ ವೀಕ್ಷಿಸಲು ವಿವಿಯ ಎಕ್ಸಿಕ್ಯುಟಿವ್ ಕೌನ್ಸಿಲ್ನ ಸದಸ್ಯರ ತಂಡ ಒಂದು ವಾರದಲ್ಲಿ ಅಲ್ಲಿಗೆ ಭೇಟಿ ನೀಡಲಿದೆ ಎಂದು ತಿಳಿಸಿದರು.
ವಿಟಿಯುನಿಂದ ಹೊರ ಬರುವ ಪ್ರತಿಯೊಬ್ಬ ಪದವೀಧರನಿಗೂ ಉದ್ಯೋಗ ಸಿಗುವ ನಿಟ್ಟಿನಲ್ಲಿ ಕ್ಯಾಂಪಸ್ ಆಯ್ಕೆಯ ಅವಕಾಶ ಸೃಷ್ಟಿಸಲಾಗುವುದು.
ಕ್ಯಾಂಪಸ್ಗಳಿಗೆ ಉದ್ಯಮಗಳನ್ನು ತರುವ ಪ್ರಯತ್ನ ಸಾಗಿದೆ. ಜಿಲ್ಲೆಗಳಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಲಾಗುವುದು ಎಂದರು.
ವಿಟಿಯುನಿಂದ ಗ್ಲೋಬಲ್ ಕ್ಯಾಂಪಸ್
ವಿಟಿಯುನಿಂದ ಗ್ಲೋಬಲ್ ಕ್ಯಾಂಪಸ್ ಮಾಡಿದ್ದೇವೆ.
ವಿದ್ಯಾರ್ಥಿಗಳು ವಿದೇಶಗಳಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಬೇಕಾದರೆ ಮಧ್ಯವರ್ತಿಗಳ ಬಳಿಗೆ ಹೋಗುವುದನ್ನು ತಪ್ಪಿಸಿ ಸ್ಥಳೀಯವಾಗಿಯೆ ಎಲ್ಲ ಮಾಹಿತಿ ಮತ್ತು ಸೌಲಭ್ಯಗಳು ದೊರೆಯುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಈ ನಿಟ್ಟಿನಲ್ಲಿ ವಿವಿಯು ಅಮೆರಿಕದ ಸ್ಟಾರ್ಟಪ್ ಕಂಪನಿಯೊಂದರ ಜತೆಗೆ ಒಡಂಬಡಿಕೆಗೆ ಸಹಿ ಹಾಕಿದೆ.
ಇದರಿಂದಾಗಿ ಜಗತ್ತಿನ 1500 ವಿಶ್ವವಿದ್ಯಾಲಯಗಳ ಮಾಹಿತಿ ಲಭ್ಯವಾಗಲಿದೆ. ಜತೆಗೆ ಸ್ಕಾಲರ್ಶಿಪ್ ಕೂಡಾ ಸಿಗಲಿದೆ ಎಂದು ತಿಳಿಸಿದರು.
ಇದಕ್ಕೆ ಸಂಬಂಧಿಸಿದಂತೆ ಸಭೆ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಎಲ್ಲ ಮಾಹಿತಿ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಾಗಲಿದೆ ಎಂದರು.
ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬೇಕಾದ ತರಬೇತಿ ಕಾರ್ಯಕ್ರಮಗಳು ಸೇರಿ ಎಲ್ಲ ಸೌಲಭ್ಯಗಳು ಒಂದೇ ಕಡೆ ಸಿಗಲಿವೆ ಎಂದು ತಿಳಿಸಿದರು.
ವಿಟಿಯುನಿಂದ ಹಲವು ಬದಲಾವಣೆ
ವಿಟಿಯು ಹಲವು ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಈ ವರ್ಷ ಪದವಿ ಪೂರೈಸಲಿರುವ ವಿದ್ಯಾರ್ಥಿಗಳಿಗೆ ಜೂನ್ ಅಂತ್ಯಕ್ಕೆ ಡಿಗ್ರಿ ಸರ್ಟಿಫಿಕೆಟ್ ನೀಡಲಾಗುವುದು.
ಇತ್ತೀಚೆಗೆ ಮುಕ್ತಾಯವಾದ 3ನೇ ಸೆಮಿಸ್ಟರ್ ಫಲಿತಾಂಶ ಘೋಷಿಸುವಲ್ಲಿ ವಿಟಿಯು ದೇಶದಲ್ಲೇ ದಾಖಲೆ ಮಾಡಿದೆ.
ಕೊನೆಯ ಪ್ರಾಕ್ಟಿಕಲ್ ಪರೀಕ್ಷೆ ಮುಗಿದ ಕೆಲವೇ ಗಂಟೆಗಳಲ್ಲಿ ಫಲಿತಾಂಶ ನೀಡಲಾಯಿತು ಎಂದು ವಿವರಿಸಿದರು.
ಈ ಬಾರಿ ಮೇನಲ್ಲಿ ಫಲಿತಾಂಶ ನೀಡಿ ಜೂನ್ 15-20ರೊಳಗೆ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ತಾವು ಕುಲಪತಿಯಾದ ನಂತರ ಹಲವು ಬದಲಾವಣೆ ಮಾಡಲಾಗಿದೆ. ಮೊದಲ ಸೆಮಿಸ್ಟರ್ನಿಂದಲೆ ಚಾಯ್ಸ ಬೇಸ್ಡ್ ಕ್ರೆಡಿಟ್ ಸಿಸ್ಟಂ ಜಾರಿಗೆ ತರಲಾಗಿದೆ.
ಬಿಇ ಆನರ್ಸ್ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆನ್ಲೈನ್ ಡಿಗ್ರಿ ನೀಡುವ ಉದ್ದೇಶವಿದೆ ಎಂದು ಹೇಳಿದರು.
ನಾಟಕ, ಸಂಗೀತ ನಿರ್ದೇಶಕ ಪಿಚ್ಚಳ್ಳಿ ಶ್ರೀನಿವಾಸ್, ವಿಟಿಯು ಎಕ್ಸಿಕ್ಯುಟಿವ್ ಕೌನ್ಸಿಲ್ನ ಸದಸ್ಯರಾದ ಜಿ. ರಾಕೇಶ್, ಡಾ.ಪ್ರಸಾದ್ ಬಿ. ರಾಂಪುರೆ, ಅಕಾಡೆಮಿಕ್ ಸದಸ್ಯ ಡಾ.ಡಿ. ಅಬ್ದುಲ್ ಬುಡೇನ್, ಕಾಲೇಜಿನ ಪ್ರಾಚಾರ್ಯ ಡಾ.ಡಿ.ಪಿ. ನಾಗರಾಜಪ್ಪ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಇದ್ದರು.
ಬಿ.ಎನ್. ವೀರಪ್ಪ ಸ್ವಾಗತಿಸಿದರು.