ದಾವಣಗೆರೆ : ಪುತ್ರನ ಲಂಚ ಸ್ವೀಕಾರ ಪ್ರಕರಣ ಹಿನ್ನೆಲೆಯಲ್ಲಿ ನಾಪತ್ತೆಯಾಗಿದ್ದ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ದೊರೆತ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಕ್ಷೇತ್ರಕ್ಕೆ ವಾಪಸಾದರು.
ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದ ಒಂದೆರಡು ಗಂಟೆಗಳ ನಂತರ ಅವರು ಮಾಡಾಳು ಗ್ರಾಮದಲ್ಲಿ ಮೊದಲಿಗೆ ಕಾಣಿಸಿಕೊಂಡರು. ತಮ್ಮ ನಾಯಕನನ್ನು ನೋಡುತ್ತಿದ್ದಂತೆ ಹರ್ಷ ಚಿತ್ತರಾದ ಅವರ ಬೆಂಬಲಿಗರು ಸಂಭ್ರಮಿಸಿದರು.
ನಂತರ ಅವರಿಗೆ ಮಾಲೆ ಹಾಕಿ, ಪುಷ್ಪವೃಷ್ಟಿ ಮಾಡಿ ಜೈಕಾರ ಕೂಗಿದರು. ಹೆಗಲ ಮೇಲೆ ಹೊತ್ತು ಕುಣಿದು, ಅದ್ದೂರಿ ಸ್ವಾಗತದೊಂದಿಗೆ ನಲ್ಲೂರು ಗ್ರಾಮದಿಂದ ಮೆರವಣಿಗೆ ಮಾಡಿದರು.
ಇದಕ್ಕೂ ಮೊದಲು ಚನ್ನಗಿರಿ ಪಟ್ಟಣದಲ್ಲಿ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬೆಂಗಳೂರಿನ ತಮ್ಮ ಮನೆಯಲ್ಲಿ ಸಿಕ್ಕಿರುವುದು ಕೃಷಿ, ನ್ಯಾಯಯುತ ವ್ಯಾಪಾರದಿಂದ ದುಡಿದು ಸಂಪಾದಿಸಿದ ಹಣವೇ ಹೊರತು ಭ್ರಷ್ಟಾಚಾರದಿಂದ ಬಂದಿದ್ದಲ್ಲ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಸ್ಪಷ್ಟೀಕರಣ ನೀಡಿದರು.
ಮಾಡಾಳು ಗ್ರಾಮದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಚನ್ನಗಿರಿ ತಾಲೂಕು ಅಡಕೆಯ ನಾಡು, ಇಲ್ಲಿನ ಜನರ ಮನೆಯಲ್ಲಿ 4-5 ಕೋಟಿ ರೂ. ಹಣ ಇರುವುದು ಆಶ್ಚರ್ಯವೇನಲ್ಲ. ತಮ್ಮದು 125 ಎಕರೆ ಅಡಕೆ ತೋಟವಿದೆ, ಕ್ರಷರ್ಗಳಿವೆ, ಅಡಕೆ ಮಂಡಿಯಿದೆ. ಲೋಕಾಯುಕ್ತ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸುತ್ತೇನೆ ಎಂದರು.
ಲೋಕಾಯುಕ್ತದಿಂದ ತಮಗೆ ಯಾವುದೇ ನೋಟಿಸ್ ಬಂದಿಲ್ಲ, ಆದರೆ ನ್ಯಾಯಾಲಯದ ಸೂಚನೆಯಂತೆ 48 ಗಂಟೆಯೊಳಗೆ ಹಾಜರಾಗುತ್ತೇನೆ ಎಂದು ತಿಳಿಸಿದರು.