ದಾವಣಗೆರೆ : ಯುವಜನರು ದುಶ್ಚಟಗಳಿಗೆ ಒಳಗಾದರೆ ಒಂದು ದೇಶವೇ ಸಂಪೂರ್ಣ ನಾಶವಾಗಲಿದೆ. ಹಾಗಾಗಿ ಮಕ್ಕಳು ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಹೇಳಿದರು.
ಕರುಣಾ ಜೀವ ಕಲ್ಯಾಣ ಟ್ರಸ್ಟ್ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ನಗರದ ಯಜಮಾನ್ ಬೆಳ್ಳೂಡಿ ಸೋಮಶೇಖರಪ್ಪ ಗೌರಮ ್ಮಪ್ರೌಢಶಾಲೆಯಲ್ಲಿ ಬುಧವಾರ ಆಹಾರ ಬೇಕು ತಂಬಾಕು ಬೇಡ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿವರ್ಷ ಜಾಗತಿಕವಾಗಿ ಎಂಟು ಮಿಲಿಯನ್ ಜನರು ತಂಬಾಕು ಸಂಬಂಧಿತ ಕಾಯಿಲೆಗಳಿಂದ ಸಾವಿಗೀಡಾಗುತ್ತಿದ್ದಾರೆ. ಧೂಮಪಾನ ಹಾಗೂ ಹೊಗೆರಹಿತ ತಂಬಾಕು ಉತ್ಪನ್ನಗಳ ಸೇವನೆಯಿಂದ ಲಕ್ಷಾಂತರ ಜನರು ಬಳಲುತ್ತಿದ್ದಾರೆ. ತಂಬಾಕು ಮಾನಸಿಕ ಮತ್ತು ಶಾರೀರಿಕವಾಗಿ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತಿದೆ ಎಂದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ ತಂಬಾಕು ಸೇವನೆಯು ಹೃದಯ ರಕ್ತನಾಳದ ಕಾಯಿಲೆ, ಕ್ಯಾನ್ಸರ್, ದೀರ್ಘಕಾಲದ ಶ್ವಾಸಕೋಶ ಮೊದಲಾದ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಇಂತಹ ಕಾಯಿಲೆಗಳಿಗೆ ತುತ್ತಾಗುವ ಬದಲು ಪೌಷ್ಠಿಕ
ಆಹಾರ ಸೇವಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಬೇಕು ಎಂದರು.
ಡಾ.ಜಿ.ಡಿ.ರಾಘವನ್ ಮಾತನಾಡಿ ಮಕ್ಕಳು ಕುತೂಹಲದಿಂದ ತಂಬಾಕು ಸೇವನೆ ಮಾಡುವುದು ಮುಂದೆ ಹವ್ಯಾಸವಾಗುತ್ತದೆ. ನಂತರ ವ್ಯಸನವಾಗಿ ಪರಿವರ್ತನೆಯಾಗುತ್ತದೆ. ಕೊನೆಗೆ ಕ್ಯಾನ್ಸರ್, ಅಸ್ತಮದಂತಹ ಭೀಕರ ರೋಗಗಳಿಂದ ಬಳಲಬೇಕಾಗುತ್ತದೆ. ಈ ಬಗ್ಗೆ ಜಾಗೃತವಾಗಿರಬೇಕು ಎಂದರು.
ಶಾಲೆಯ ಕಾರ್ಯದರ್ಶಿ ಜಿ.ಕೆ. ಪಂಚಣ್ಣ ಅಧ್ಯಕ್ಷತೆ ವಹಿಸಿದ್ದರು. ಕರುಣಾ ಟ್ರಸ್ಟಿನ ಆರ್.ಬಿ.ಪಾಟೀಲ್ ಮತ್ತು ಸೋನು ಇತರರು ಇದ್ದರು.
ಶಾಲೆಯ ಮುಖ್ಯಶಿಕ್ಷಕ ಎಂ.ವಿ.ಮಹೇಶ್ವರಪ್ಪ ಪ್ರಾಸ್ತಾವಿಕ ಮಾತನಾಡಿದರು. ಶಾಲೆಯ ಶಿಕ್ಷಕರು ಮಕ್ಕಳಿಗೆ ತಂಬಾಕು ಸೇವನೆ ಮಾಡದಂತೆ ಪ್ರತಿಜ್ಞಾವಿಧಿ ಬೋಧಿಸಿದರು.