ದಾವಣಗೆರೆ : ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರಿತು ನೀಡಿರುವ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಗೆ ಒಂದು ಸಿದ್ಧಾಂತವಿದೆ. ಸರ್ಜಿಕಲ್ ಸ್ಟ್ರೈಕ್ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ನಿಂದಿಸಿದ್ದರು. ಯಾರೇ ಆಗಲಿ ಯಾರ ಬಗ್ಗೆಯೂ ಹಾಗೆ ಮಾತನಾಡಬಾರದು. ಆರೋಗ್ಯಕರ ಟೀಕೆ, ಟಿಪ್ಪಣಿ ಇರಬೇಕು ಎಂದು ಹೇಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಜೀವ ಬೆದರಿಕೆ ಕುರಿತು ಪ್ರತಿಕ್ರಿಯಿಸಿ, ಇದನ್ನು ಖಂಡಿಸುತ್ತೇನೆ. ಅವರು ಪ್ರಧಾನಿಗೆ, ಗೃಹ ಸಚಿವರಿಗೆ ಹಾಗೂ ಸಿಎಂಗೆ ದೂರು ನೀಡಲಿ ಎಂದರು.
ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರಕ್ಕೆ ಅನೇಕರು ಟಿಕೆಟ್ ಆಕಾಂಕ್ಷಿಗಳಿದ್ದು, ಹೊರ ಜಿಲ್ಲೆಯವರನ್ನು ಬಿಟ್ಟು ಸ್ಥಳೀಯರಿಗೆ ಅವಕಾಶ ಕೊಡಬೇಕು. ಕುಟುಂಬದವರಿಗೆ ಟಿಕೆಟ್ ಬೇಕು ಎಂದರೆ ಹೇಗೆ? ಸಾಮಾನ್ಯ ಕಾರ್ಯಕರ್ತ ಜಿಲ್ಲಾ ಘಟಕದ ಅಧ್ಯಕ್ಷರಾದಂತೆ ಸಂಸದರೂ ಆಗಲಿ ಬಿಡಿ ಎಂದು ಹೇಳಿದರು.