ದಾವಣಗೆರೆ : ತಾಯಂದಿರು ಮಕ್ಕಳನ್ನು ಜರಿಯದೆ ಪ್ರೋತ್ಸಾಹಿಸುವ ಮೂಲಕ ಅವರನ್ನು ಸಾಧನೆಗೆ ಹುರಿದುಂಬಿಸಬೇಕು ಎಂದು ಬೆಂಗಳೂರಿನ ಬೆಳಕು ಅಕಾಡೆಮಿಯ ಸಂಸ್ಥಾಪಕಿ ಅಶ್ವಿನಿ ಅಂಗಡಿ ಹೇಳಿದರು.
ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಕಚೇರಿಯಲ್ಲಿ ಶನಿವಾರ, ಜಿಲ್ಲಾ ಯುವ ಘಟಕದ ನೇತೃತ್ವದಲ್ಲಿ ಹರ ಸೇವಾ ಸಂಸ್ಥೆ ಹಾಗೂ ಜಿಲ್ಲೆಯ ಎಲ್ಲ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಕ್ಕಳಿಗೆ ಧನಾತ್ಮಕವಾದ ವಿಷಯಗಳನ್ನು ಹೇಳಬೇಕು. ಬೇರೆಯವರೊಂದಿಗೆ ಹೋಲಿಕೆ ಮಾಡಬಾರದು ಎಂದು ತಿಳಿಸಿದರು. ತಮ್ಮ ಸಂಸ್ಥೆಯಲ್ಲಿ ಅನಾಥ, ಅಂಧ ಮತ್ತು ಬುದ್ಧಿಮಾಂದ್ಯರಾದ 200 ಮಕ್ಕಳಿದ್ದಾರೆ. ಇಂತಹ ಮಕ್ಕಳಿದ್ದರೆ ನಮ್ಮ ಮಡಿಲಿಗೆ ಹಾಕಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ಯುವ ಘಟಕದ ಸ್ವರೂಪ್ ಅಂಗಡಿ, ಶಿವಕುಮಾರ್ ಹೊಸ್ಕೆರೆ, ಸುರೇಶ್ ಹಡ್ಲಿಗೇರೆ, ಚಂದ್ರಶೇಖರ್ ನೂಲ, ನೌಕರ ಘಟಕದ ಶ್ರೀಧರ್, ಕುಬೇರಪ್ಪ, ಸುರೇಶ, ದೇವರಾಜ್, ಮಹಿಳಾ ಘಟಕದ ಸುಷ್ಮಾ ಪಾಟೀಲ್, ವೀಣಾ ನಟರಾಜ್ ಬೆಳ್ಳೂಡಿ ಇದ್ದರು.
ಮೀನಾ ಪ್ರಸಾದ ಮತ್ತು ಸುಜಾತಾ ಪ್ರಾರ್ಥಿಸಿದರು. ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಿವಕುಮಾರ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಕಾಶೀನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರ್ ಹುಂಬಿ ನಿರೂಪಿಸಿದರು.
ಜಮ್ಮುವಿನಲ್ಲಿ ವೀರ ಮರಣವನ್ನಪ್ಪಿದ ಕನ್ನಡಿಗ ಕ್ಯಾಪ್ಟನ್ ಪ್ರಾಂಜಲ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಿವೃತ್ತ ಯೋಧ ಮಲ್ಲನಗೌಡ ಪಾಟಿಲ್, ಅಂಧ ದಂಪತಿ ವೀರೇಶ್ ಮತ್ತು ಅಶ್ವಿನಿ ಅಂಗಡಿ ಅವರನ್ನು ಸನ್ಮಾನಿಸಲಾಯಿತು.