ದಾವಣಗೆರೆ : ಜಿಲ್ಲಾದ್ಯಂತ ಸೋಮವಾರ ಗುರು ಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ವಿಶೇಷ ಅಲಂಕಾರದಿಂದ ದೇವಸ್ಥಾನಗಳು ಕಳೆಗಟ್ಟಿದ್ದವು. ಪೂಜೆ, ಅಭಿಷೇಕ ಸೇರಿ ಧಾರ್ಮಿಕ ಕಾರ್ಯಗಳು ನೆರವೇರಿದವು.
ನಗರದ ಎಂಸಿಸಿ ‘ಎ’ ಬ್ಲಾಕ್ನ ಸಾಯಿಬಾಬಾ ಮಂದಿರಕ್ಕೆ ಭಕ್ತ ಸಾಗರ ಹರಿದು ಬಂದಿತು. ಬೆಳಗ್ಗೆ ಕಾಕಡಾರತಿ, ಪಂಚಾಮೃತ ಅಭಿಷೇಕ, ದೀಪಾರಾಧನೆ, ಧ್ವಜಾರೋಹಣ ನೆರವೇರಿದವು. ಬಾಬಾ ಅವರ ಬೆಳ್ಳಿ ಮೂರ್ತಿಗೆ ಭಕ್ತರು ಹಾಲಿನ ಅಭಿಷೇಕ ಮಾಡಿದರು. ಸಾಯಿ ಸತ್ಯನಾರಾಯಣ ಪೂಜೆ, ಮಧ್ಯಾಹ್ನಾರತಿ, ಧೂಪಾರತಿ, ಪಲ್ಲಕ್ಕಿ ಉತ್ಸವ, ಶೇಜಾರತಿ ನೆರವೇರಿದವು.
ಜಯನಗರದ ಸಾಯಿಬಾಬಾ ಮಂದಿರದಲ್ಲೂ ವಿಶೇಷ ಅಲಂಕಾರ, ಪೂಜೆಗಳು ನಡೆದವು. ಭಕ್ತರು ಸಾಲುಗಟ್ಟಿ ದರ್ಶನ ಪಡೆದರು. ಜಯದೇವ ವೃತ್ತದ ಶ್ರೀ ಗುರು ದತ್ತಾತ್ರೇಯ ದೇವಾಲಯದಲ್ಲಿ ವಿಶೇಷ ಪೂಜೆ, ಭಜನೆ ನಡೆದವು.