More

    ಅಡಕೆ ಆಮದು ನಿಷೇಧ, ರಫ್ತಿಗೆ ಉತ್ತೇಜನ

    ದಾವಣಗೆರೆ : ಜಿಲ್ಲೆಯಲ್ಲಿ ಅತಿಹೆಚ್ಚು ಅಡಕೆ ಬೆಳೆಯುವ ಚನ್ನಗಿರಿ ತಾಲೂಕು ಅಡಕೆ ನಾಡು ಎಂದು ಪ್ರಸಿದ್ಧಿಯಾಗಿದ್ದು, ಇಂತಹ ಪ್ರದೇಶಕ್ಕೆ ಕಳಂಕ ಬರುವಂತೆ ಕೇಂದ್ರ ಸರ್ಕಾರ ಮತ್ತು ಈ ಜಿಲ್ಲೆಯ ಲೋಕಸಭಾ ಪ್ರತಿನಿಧಿ ನಡೆದುಕೊಂಡಿದ್ದಾರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಆರೋಪಿಸಿದರು.
     ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಪನಹಳ್ಳಿ ಗ್ರಾಮದಿಂದ ಬುಧವಾರ ಪ್ರಚಾರ ಕಾರ್ಯ ಆರಂಭಿಸಿದ ಅವರು, ಕೋಗಲೂರು, ದೊಡ್ಡ ಮಲ್ಲಾಪುರ, ಕರೇಕಟ್ಟೆ, ಸೋಮಲಾಪುರ, ಕಾಕನೂರು, ನುಗ್ಗಿಹಳ್ಳಿ, ಚಿಕ್ಕಗಂಗೂರು, ಕೊರಟಿಕೆರೆ, ಹೆಬ್ಬಳಗೆರೆ, ಹೊದಿಗೆರೆ, ಗರಗ, ದೇವರಹಳ್ಳಿ, ಕಗತೂರು, ಬುಳಸಾಗರ, ಇಟ್ಟಿಗೆ, ಲಿಂಗದಹಳ್ಳಿ, ನಲ್ಲೂರು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
     ಚನ್ನಗಿರಿ ತಾಲೂಕಿನಾದ್ಯಂತ ಅಡಕೆ ಬೆಳೆ ಬಂಪರ್ ಆಗಿ ಬೆಳೆಯುತ್ತಿದ್ದರೂ ಕೇಂದ್ರ ಸರ್ಕಾರ ಅಡಕೆಯನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಂಡಿತು. ಇದಕ್ಕೆ ಸಂಸದರು ಕನಿಷ್ಠ ಪಕ್ಷ ವಿರೋಧ ಸಹ ವ್ಯಕ್ತಪಡಿಸಲಿಲ್ಲ. ಇಂತಹ ಸಂಸದರು ನಿಮಗೆ ಬೇಕಾ ಎಂದು ಪ್ರಶ್ನಿಸಿದರು.
     ಈ ಬಾರಿ ದೇಶದಲ್ಲಿ ಖಂಡಿತವಾಗಿ ಬದಲಾವಣೆ ಆಗಲಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲಿದೆ. ನಮ್ಮ ಸರ್ಕಾರದಲ್ಲಿ ಅಡಕೆಗೆ ಸ್ಥಿರ ಬೆಲೆ ಕೊಡಿಸುವುದು, ಅಡಕೆ ಸಂಸ್ಕರಣಾ ಘಟಕ ಆರಂಭಿಸುವುದು ಸೇರಿ ಪೂರಕವಾದ ವಾತಾವರಣ ನಿರ್ಮಿಸುತ್ತೇವೆ ಎಂದರು.
     ಈ ಭಾಗದ ಶಾಸಕ ಶಿವಗಂಗಾ ಬಸವರಾಜ್ ಸಹಕಾರದಿಂದ ಚನ್ನಗಿರಿ ಸುತ್ತಮುತ್ತ ರೈತರಿಗೆ ಸಮರ್ಪಕವಾದ ರಸ್ತೆಗಳ ನಿರ್ಮಾಣ ಹಾಗೂ ಏಷ್ಯಾದ ಅತಿದೊಡ್ಡ ಕೆರೆ ಶಾಂತಿ ಸಾಗರವನ್ನು ಸಂಪೂರ್ಣ ಅಭಿವೃದ್ಧಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.
     ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ತರುವ ಭರವಸೆ ನೀಡಿತ್ತು. ಅದರಂತೆ ಸರ್ಕಾರ ಬಂದ ತಕ್ಷಣ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಚನ್ನಗಿರಿ ವಿಧಾನಸಭಾ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು 177 ಕೋಟಿ ರೂ.ಗಳಷ್ಟು ಹಣವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.
     ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಂಚ ನ್ಯಾಯ ಪಚ್ಚೀಸ್ ಗ್ಯಾರಂಟಿ ಭರವಸೆಗಳನ್ನು ನೀಡಲಾಗಿದ್ದು, ಯುವ ನ್ಯಾಯದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯದಡಿ ಪ್ರತಿ ಮಹಿಳೆಗೆ 1 ಲಕ್ಷ ರೂ., ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗವನ್ನು ಜಾರಿಗೊಳಿಸುವುದು, ನರೇಗಾ ಕೂಲಿ ಹಣವನ್ನು 400 ರೂ.ಗೆ ಹೆಚ್ಚಿಸುವುದು ಸೇರಿ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, ಅದರಂತೆ ಜಾರಿಗೆ ತರುತ್ತೇವೆ ಎಂದು ಆಶ್ವಾಸನೆ ನೀಡಿದರು.
     ಶಾಸಕ ಶಿವಗಂಗಾ ಬಸವರಾಜ್, ಮಾಜಿ ಶಾಸಕ ವಡ್ನಾಳ್ ರಾಜಣ್ಣ, ಬ್ಲಾಕ್ ಅಧ್ಯಕ್ಷರಾದ ಜಬಿವುಲ್ಲಾ, ಶ್ರೀನಿವಾಸ್, ಪಕ್ಷದ ಮುಖಂಡರಾದ ಹೊದಿಗೆರೆ ರಮೇಶ್, ವೀರೇಶ್ ನಾಯ್ಕ, ವಡ್ನಾಳ್ ಜಗದೀಶ್, ಶಿವಗಂಗಾ ಶ್ರೀನಿವಾಸ್ ಸೇರಿ ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts