ದಾವಣಗೆರೆ : ಅಶ್ವತ್ಥಪುರ ದೇಶಸ್ತ ಬ್ರಾಹ್ಮಣ ಸಮಾಜದಿಂದ ಆರೋಗ್ಯ ನಿಧಿ ಸ್ಥಾಪಿಸಲಾಗಿದ್ದು ಬಡವರಿಗೆ ಇದರಿಂದ ಸಹಾಯವಾಗಲಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಡಾ. ಪಿ.ಎಸ್. ಸುರೇಶ್ ಬಾಬು ಹೇಳಿದರು.
ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಶ್ವತ್ಥಪುರ ದೇಶಸ್ತ ಬ್ರಾಹ್ಮಣ ಸಮಾಜದ ಜಿಲ್ಲಾ ಘಟಕದ ಸರ್ವ ಸದಸ್ಯರ ಸಭೆ, ಪ್ರತಿಭಾ ಪುರಸ್ಕಾರ, ಗುರುವಂದನೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಆರೋಗ್ಯ ನಿಧಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಸಮಾಜದ ಕಡುಬಡವರಿಗೆ ಆರೋಗ್ಯ ಸಮಸ್ಯೆಯಾದಾಗ ಶಸ್ತ್ರಚಿಕಿತ್ಸೆ ಇನ್ನಿತರ ಚಿಕಿತ್ಸೆಗೆ ಈ ನಿಧಿಯ ಮೂಲಕ ಹಣಕಾಸಿನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಗುರುವಂದನೆ ಸ್ವೀಕರಿಸಿದ ದೊಡ್ಡಬಾತಿ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಉಷಾ ಶ್ರೀಧರ್ ಮಾತನಾಡಿ, ಓದುವುದರಲ್ಲಿ ಈಗಿನ ವಿದ್ಯಾರ್ಥಿಗಳಲ್ಲಿ ಬಹಳ ಪೈಪೋಟಿಯಿದ್ದು ಹೆಚ್ಚಿನ ಅಂಕ ಗಳಿಸಿ ಕಾಲೇಜಿಗೆ, ಪಾಲಕರಿಗೆ ಹಾಗೂ ದೇಶಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.
ಸಮಾಜದ ಅಧ್ಯಕ್ಷರನ್ನಾಗಿ ಮುಂದಿನ ಮೂರು ವರ್ಷಗಳಿಗೆ ಡಾ. ಪಿ .ಎಸ್. ಸುರೇಶ್ ಬಾಬು, ಕಾರ್ಯದರ್ಶಿಯಾಗಿ ಎಲ್.ವಿ. ಸುಬ್ರಮಣ್ಯ ಹಾಗೂ 21 ಸದಸ್ಯರ ನಿರ್ದೇಶಕ ಮಂಡಳಿಯನ್ನು ಈ ಸಂದರ್ಭದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಎಸ್ಎಸ್ಎಲ್ಸಿ, ಪಿಯುಸಿ, ಪದವಿಪೂರ್ವ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಮಾಜದ ಕಾರ್ಯದರ್ಶಿ ಎಲ್.ವಿ. ಸುಬ್ರಮಣ್ಯ, ಖಜಾಂಚಿ ಉತ್ಸವ ರಾವ್, ಸಾಂಸ್ಕೃತಿಕ ಮುಖ್ಯಸ್ಥ ಬಿ.ಟಿ. ಚಂದ್ರಶೇಖರ್, ಕ್ರೀಡಾಕೂಟದ ಮುಖ್ಯಸ್ಥ ಪಿ.ಎಲ್. ಶಂಕರ್ ರಾವ್, ಜಿ.ಎಂ.ಐ.ಟಿ, ಡಿಪ್ಲೊಮಾ ಕಾಲೇಜಿನ ಪ್ರಾಚಾರ್ಯ ಶ್ರೀಧರ್, ನಿರ್ದೇಶಕರಾದ ವಿಜೇಶ್ ಕೊಲ್ಲೂರು, ರವಿಚಂದ್ರ, ರಜತ್, ರಾಜೇಂದ್ರ, ಮಹೇಶ್, ಅಚ್ಯುತಮೂರ್ತಿ, ವೀಣಾ ಬಾಬು, ಸುಷ್ಮಾ ಚಕ್ರಧರ ಇದ್ದರು.
ದಿವಾಕರ್ ಸ್ವಾಗತಿಸಿದರು. ವಸಂತ್ ಕೊಪ್ಲು ವಂದಿಸಿದರು. ಅನಿಲ್ ಬಾರಂಗಳ ನಿರೂಪಿಸಿದರು. ಅಂಬಿಕಾ ಅರುಣ್ ಪ್ರಾರ್ಥಿಸಿದರು.