More

    ಪ್ರಕೃತಿ ವಿಕೋಪ ಎದುರಿಸಲು ಎಸ್‌ಡಿಆರ್‌ಎಫ್ ಸದಾ ಸಿದ್ಧ

    ದಾವಣಗೆರೆ : ಪ್ರಕೃತಿ ವಿಕೋಪ ಸೇರಿ ಅನೇಕ ತುರ್ತು ಸಂದರ್ಭದಲ್ಲಿ ಸಾರ್ವಜನಿಕರನ್ನು ಆಪತ್ತಿನಿಂದ ಕಾಪಾಡಲು ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‌ಡಿಆರ್‌ಎಫ್) ಸದಾ ಸಿದ್ಧವಾಗಿರುತ್ತದೆ ಎಂದು ಎಸ್‌ಡಿಆರ್‌ಎಫ್‌ನ ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಎಸ್. ಕಿರಣಕುಮಾರ್ ತಿಳಿಸಿದರು.
     ನಗರದ ಪಿ.ಜೆ. ಬಡಾವಣೆಯಲ್ಲಿರುವ ಸೇಂಟ್ ಪಾಲ್ಸ್ ಕಾನ್ವೆಂಟ್ ಶಾಲೆಯಲ್ಲಿ ಶನಿವಾರ, ಪ್ರಕೃತಿ ವಿಕೋಪ ನಿರ್ವಹಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
     ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯಂತೆ ರಾಜ್ಯ ಸರ್ಕಾರ ಜಿಲ್ಲೆಯ ದೇವರಬೆಳಕೆರೆಯಲ್ಲಿ ಯಾವುದೇ ವಿಪತ್ತುಗಳನ್ನು ಎದುರಿಸಲು ಸನ್ನದ್ಧವಾಗಿ ಒಂದು ತಂಡವನ್ನು ಸ್ಥಾಪಿಸಿದೆ. ಸ್ಥಳೀಯವಾಗಿ ಎದುರಾಗುವ ಯಾವುದೇ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ನಮ್ಮ ತಂಡ ತಯಾರಿದೆ ಎಂದರು.
     ವಿಪತ್ತುಗಳನ್ನು ಎದುರಿಸಲು ಸರ್ಕಾರವು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳನ್ನು ತಯಾರು ಮಾಡಿ, ತರಬೇತಿ, ಅಗತ್ಯ ಪರಿಕರಗಳನ್ನು ನೀಡಿದೆ. ಇದರಿಂದ ಸಾವು, ನೋವುಗಳನ್ನು ತಡೆಯಲು ಪ್ರಯತ್ನಿಸಬಹುದು. ಬೆಂಗಳೂರು, ಮಂಗಳೂರು, ಬೆಳಗಾವಿ, ಕಲಬುರಗಿ ಹಾಗೂ ದಾವಣಗೆರೆಯಲ್ಲಿ ಎಸ್‌ಡಿಆರ್‌ಎಫ್ ತಂಡಗಳಿವೆ ಎಂದು ಮಾಹಿತಿ ನೀಡಿದರು.
     ಸರ್ಕಾರ ಪ್ರತಿಯೊಂದು ಶಾಲೆಗಳ ಮಕ್ಕಳಿಗೆ ಪ್ರಕೃತಿ ವಿಕೋಪಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಮಾಹಿತಿ ನೀಡಲು ಅವಕಾಶ ಮಾಡಿಕೊಟ್ಟಿದೆ. ಸಿಡಿಲು, ಪ್ರವಾಹ, ವಿದ್ಯುತ್ ಅವಘಡ, ಅಪಘಾತದಂಥ ಸಂದರ್ಭಗಳನ್ನು ಹೇಗೆ ಎದುರಿಸಬೇಕು ಎಂದು ವಿವರಿಸಿದರು.
     ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಮಾರ್ಜರಿ ಮಾತನಾಡಿ, ಪ್ರಕೃತಿ ವಿಕೋಪ ಉಂಟಾದಾಗ ಎದುರಿಸುವುದು ಬಹಳ ಕಷ್ಟಕರ. ಅಂತಹದರಲ್ಲಿ ಈ ತಂಡದವರು ತಮ್ಮ ಜೀವವನ್ನೂ ಲೆಕ್ಕಿಸದೇ ಸಮಾಜಮುಖಿ ಕಾರ್ಯ ಮಾಡುತ್ತಾರೆ. ಪ್ರತಿಯೊಬ್ಬ ಮಕ್ಕಳೂ ತಮ್ಮ ಓದಿನ ಜತೆಯಲ್ಲಿ ಇಂತಹ ತರಬೇತಿಗಳನ್ನು ಪಡೆದು ಮುಂದೆ ನೀವು ಸಹಾ ಇಂತಹ ಕಾರ್ಯಗಳಲ್ಲಿ ಭಾಗವಹಿಸುವಂತಾಗಿರಿ ಎಂದು ಸಲಹೆ ನೀಡಿದರು.
     ಎಸ್‌ಡಿಆರ್‌ಎಫ್ ಸಬ್ ಇನ್ಸ್‌ಪೆಕ್ಟರ್ ವೆಂಕಟರಾಯ ನಾಯಕ್, ಪ್ರೌಢಶಾಲೆ ವಿಭಾಗದ ಮುಖ್ಯ ಶಿಕ್ಷಕಿ ಎಂ.ಕೆ. ಮಂಜುಳಾ, ವೈಲೆಟ್, ಕ್ಲಮೆನ್ಸಿಯಾ, ಸ್ಕೌಟ್ ಮಾಸ್ಟರ್ ರವೀಂದ್ರ ಸ್ವಾಮಿ, ಗೌಡ್ ಕ್ಯಾಪ್ಟನ್ ನಯನ ಏಸುಪ್ರಿಯ, ಎಚ್.ಎಂ.ರಜನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts