ಚಿತ್ರ: ಶುಗರ್ ಫ್ಯಾಕ್ಟರಿ
ನಿರ್ದೇಶನ: ದೀಪಕ್ ಅರಸ್
ನಿರ್ಮಾಣ: ಗಿರೀಶ್
ತಾರಾಗಣ: ಡಾರ್ಲಿಂಗ್ ಕೃಷ್ಣ, ಸೋನಲ್ ಮೊಂಟೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ, ರಂಗಾಯಣ ರಘು ಮುಂತಾದವರು
| ಪ್ರಮೋದ ಮೋಹನ ಹೆಗಡೆ
‘ಹುಡುಗಿಯರ ಸಹವಾಸ ಬೇಡ, ಈ ಪ್ರೀತಿ ಎಲ್ಲ ಸುಮ್ಮನೇ ಶೋಕಿ, ಪ್ರೀತಿ ಮಾಡಬಾರದು, ಮದುವೆ ಆಗದೇ ಒಬ್ಬನೇ ಸುಖವಾಗಿ ಇರಬಹುದು’ ಹೀಗೆ ಪ್ರೇಮ ಮತ್ತು ಹುಡುಗಿಯರ ಬಗ್ಗೆ ತಿರಸ್ಕಾರ ಭಾವ ಹೊಂದಿರುವ ವ್ಯಕ್ತಿ ಆರ್ಯ (ಕೃಷ್ಣ). ಈ ಕಾಲದವರಿಗೆ ನಿಜವಾದ ಪ್ರೀತಿ ಎಂದರೇನು ಎಂದು ಯಾರಿಗೂ ಗೊತ್ತಿಲ್ಲ ಎನ್ನುವುದೇ ಅವನ ಈ ಧೋರಣೆಗೆ ಕಾರಣ. ಏನೇ ಆದರೂ ಈ ಮನಸ್ಥಿತಿಯಿಂದ ದೂರವಾಗಬಾರದು ಎಂದು ಬದುಕುತ್ತಿರುವ ವ್ಯಕ್ತಿಯ ಜೀವನದಲ್ಲಿ ಇವನಂತೆಯೇ ಪ್ರೀತಿಯಿಂದ ದೂರವಿರಬೇಕು ಎಂಬ ಮನಸ್ಥಿತಿಯಿರುವ ಅದಿತಿ (ಸೋನಲ್) ಎಂಬ ಹುಡುಗಿಯ ಎಂಟ್ರಿ ಆಗುತ್ತದೆ. ಇಬ್ಬರೂ ಪ್ರೀತಿಸುವುದಿಲ್ಲ, ಆದರೂ ಪ್ರೀತಿಯಲ್ಲಿರುತ್ತಾರೆ. ಅದರ ನಡುವೆ ಮೂರನೆಯವರ ಪ್ರವೇಶ ಆದಾಗ ಕಥೆ ಇನ್ನೊಂದು ಸ್ವರೂಪ ಪಡೆದುಕೊಳ್ಳುತ್ತದೆ. ಮುಂದೆ? ಸ್ವತಃ ಆರ್ಯ ‘ಶುಗರ್ ಫ್ಯಾಕ್ಟರಿ’ ಪಬ್ನಲ್ಲಿ ಕುಳಿತು ಯೂಟ್ಯೂಬರ್ ಅಮುಲುಗೆ (ರುಹಾನಿ) ಹೇಳುತ್ತಾನೆ. ಈ ಜನರೇಷನ್ನವರು ಪ್ರೀತಿಯನ್ನು ಹೇಗೆ ನೋಡುತ್ತಾರೆ ಎಂಬುದನ್ನು ಹೇಳುವ ಪ್ರಯತ್ನ ನಿರ್ದೇಶಕ ದೀಪಕ್ ‘ಶುಗರ್ ಫ್ಯಾಕ್ಟರಿ’ ಸಿನಿಮಾದಲ್ಲಿ ಮಾಡಿರುವುದು ಕಾಣುತ್ತದೆ.
ಇದನ್ನೂ ಓದಿ : ‘ಡಂಕಿ’ ಪದದ ಅರ್ಥವೇನು?; ಫ್ಯಾನ್ ಪ್ರಶ್ನೆಗೆ ಶಾರುಖ್ ಕೊಟ್ಟ ಉತ್ತರ ಹೀಗಿದೆ
ಕಥೆಯ ಆಶಯದ ಬಗ್ಗೆ ಹೇಳುವುದಾದರೆ, ಸಿನಿಮಾದ ಪ್ರಮುಖ ಘಟ್ಟದಲ್ಲಿ ನಾಯಕ ನನಗೆ ‘ಯಾರೂ ಬೇಡ, ಐ ಲವ್ ಮೈಸೆಲ್ಫ್’ ಎಂದು ಹೇಳುತ್ತಾನೆ. ಬಹುಶಃ ಇದರ ಜತೆಗೆ ಪ್ರೀತಿ ಎಲ್ಲರಿಗೂ ಅನಿವಾರ್ಯ, ಜೀವನದ ಯಾವ ತಿರುವಿನಲ್ಲಿ ಅದು ಸಿಗುತ್ತದೆ ಎನ್ನುವುದು ಊಹೆಗೂ ನಿಲುಕದ್ದು ಎನ್ನುವುದನ್ನೇ ನಿರ್ದೇಶಕರು ಹೇಳಲು ಹೊರಟಿದ್ದಾರೆ. ಆದರೆ, ಕಥೆಯನ್ನು ಹೇಳುವ ಪ್ರಯತ್ನದಲ್ಲಿ ಅವರು ಎಡವಿದಂತೆ ಕಾಣುತ್ತದೆ. ಕಥೆಯಲ್ಲಿ ಹಾಗೂ ಚಿತ್ರಕಥೆಯಲ್ಲಿ ಇನ್ನಷ್ಟು ಗಟ್ಟಿತನ ಬೇಕಿತ್ತು. ಸಂತೋಷ್ ರೈ ಪತಾಜೆ ಛಾಯಾಗ್ರಹಣ ಹಾಗೂ ಕೆ.ಎಂ ಸಂತೋಷ್ ಸಂಕಲನ ನೋಡಲು ಹಿತವಾದ ಅನುಭವ ನೀಡುತ್ತದೆ. ಜತೆಗೆ ಅಲ್ಲಲ್ಲಿ ನಗಿಸುವ ಸಂಭಾಷಣೆಗಳಿವೆ.
ಇದನ್ನೂ ಓದಿ : ಸಿನಿಮಾ ಹೆಸರೇ ‘ಚಟ್ಟ’?; ನೀವಂದುಕೊಂಡ ಅರ್ಥವಲ್ಲ ಎಂದ ನಿರ್ದೇಶಕ
ಡಾರ್ಲಿಂಗ್ ಕೃಷ್ಣ ಇಲ್ಲೂ ಒಬ್ಬ ಲವರ್ ಬಾಯ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸೋನಲ್, ಅದ್ವಿತಿ ಹಾಗೂ ರುಹಾನಿ ಮೂವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ವಿಶುವಲಿ ಸಿನಿಮಾ ಅದ್ಭುತವಾಗಿ ಮೂಡಿಬಂದಿದ್ದು, ಕಥೆಯಲ್ಲಿ ಹೊಸತನವನ್ನು ಅಳವಡಿಸಿದ್ದರೆ ಚಿತ್ರ ಇನ್ನೊಂದು ಹಂತಕ್ಕೆ ತಲುಪಬಹುದಿತ್ತು. ಡಾರ್ಲಿಂಗ್ ಕೃಷ್ಣ ಇಷ್ಟಪಡುವವರು ಹಾಗೂ ಈ ಕಾಲದ ಪ್ರೇಮ ಕಥೆಯನ್ನು ನೋಡಲು ಇಚ್ಛಿಸುವವರು ಸಿನಿಮಾ ನೋಡಬಹುದು.