ಬೆಂಗಳೂರು: ಹುಲಿ ಉಗುರು ವಿಚಾರದಲ್ಲಿ ಹಿಂದೂ ಧರ್ಮದವರನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ. ನವಿಲು ಗರಿ ಕೂಡ ಬಳಸುವಂತಿಲ್ಲ ಎಂಬ ನಿಯಮವಿದೆ, ದರ್ಗಾಗಳಲ್ಲಿ ನವಿಲು ಗರಿ ಬಳಸಲಾಗುತ್ತದೆ, ಅಲ್ಲೇಕೆ ಕ್ರಮ ಇಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚಿನ ಜನ ನಕಲಿ ಹುಲಿ ಉಗುರು ಇಟ್ಟುಕೊಂಡಿದ್ದಾರೆ. ನಿಜವಾದ ಹುಲಿ ಉಗುರು ಇಟ್ಟುಕೊಂಡವರ ಮೇಲೆ ಕ್ರಮಕೈಗೊಳ್ಳಲಿ. ಅದೇ ರೀತಿ ನವಿಲು ಗರಿ ಬಳಸುವ ದರ್ಗಾದ ಮೇಲೂ ಕ್ರಮ ಆಗಬೇಕು ಎಂದರು.
ನವಿಲುಗರಿ ಇಟ್ಟುಕೊಂಡಿರುವ ದರ್ಗಾ, ಮಸೀದಿ ಮೇಲೆ ದಾಳಿ ಮಾಡಿ, ಮೌಲ್ವಿಗಳ ವಿರುದ್ಧ ಕೇಸ್ ಹಾಕಲಿ. ಆಗ ಅರಣ್ಯ ಇಲಾಖೆ ಕಾಳಜಿ ಎಷ್ಟಿದೆ ಎಂದು ಗೊತ್ತಾಗುತ್ತದೆ. ಕೇವಲ ಹಿಂದೂಗಳ ನಂಬಿಕೆಗಳನ್ನು ಟಾರ್ಗೆಟ್ ಮಾಡುವುದು ಬೇಡ ಕಾನೂನು ಕೇವಲ ಹಿಂದೂಗಳಿಗೆ ಮಾತ್ರವಲ್ಲ ಎಂದು ಕಿಡಿಕಾರಿದರು.
ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯ ಮಾಡುತ್ತೇನೆಂದ ಅವರು ಕಾನೂನು ಪಾಲನೆ ಮಾಡುವುದರೆ ಶೇ.100 ಪಾಲನೆ ಮಾಡಲಿ. ಅದು ಬಿಟ್ಟು ಒಬ್ಬರಿಗೆ ಒಂದು ನ್ಯಾಯ ಎಂಬಂತಾಗಬಾರದೆಂದರು.