ರಾಯಚೂರು: ಅಡುಗೆ ಅನಿಲ ಸಿಲೆಂಡರ್ ದರ ಏರಿಕೆ ಖಂಡಿಸಿ ಸ್ಥಳೀಯ ಅಂಬೇಡ್ಕರ ವೃತ್ತದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ನಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗಿದ ಕಾರ್ಯಕರ್ತರು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ನಿರಂತರವಾಗಿ ಸಿಲೆಂಡರ್ ಮತ್ತು ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ಆರ್ಥಿಕ ಹೊರೆ ಉಂಟು ಮಾಡಿದೆ.
ಸರ್ಕಾರ ಏಕಾಎಕಿ ಗೃಹ ಬಳಕೆ ಸಿಲೆಂಡರ್ ದರವನ್ನು 50 ರೂ. ಹೆಚ್ಚಳ ಮಾಡಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟ ಎದುರಿಸುವಂತಾಗಲಿದೆ. ವಾಣಿಜ್ಯ ಬಳಕೆ ಸಿಲೆಂಡರ್ ದರವನ್ನು 350 ರೂ. ಹೆಚ್ಚಳ ಮಾಡಿರುವುದರಿಂದ ಮಾಡಿದ್ದರಿಂದ ಹೋಟಲ್ ಸೇರಿದಂತೆ ಇನ್ನಿತರ ದರದಲ್ಲಿಯೂ ಹೆಚ್ಚಳವುಂಟಾಗಲಿದೆ. ಕಾರಣ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ನಾಗವೇಣಿ ಪಾಟೀಲ್, ಪದಾಧಿಕಾರಿಗಳಾದ ಶಶಿಕಲಾ ಭೀಮರಾಯ, ಮಂಜುಳಾ, ರಜೀಯಾ ಸುಲ್ತಾನ್, ಮುಖಂಡರಾದ ರುದ್ರಪ್ಪ ಅಂಗಡಿ, ಜಿ.ಶಿವಮೂರ್ತಿ, ಜಿ.ಸುರೇಶ, ಜಿ.ಬಸವರಾಜ ರೆಡ್ಡಿ ಪಾಲ್ಗೊಂಡಿದ್ದರು.