ಜಗಳೂರು: ಸಿಲಿಂಡರ್, ಪೆಟ್ರೋಲ್,ಡೀಸೆಲ್, ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಹಾಗೂ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಶನಿವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರವಾಸಿ ಮಂದಿರದಿಂದ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಹಳೆ ಮಹಾತ್ಮಗಾಂಧಿ ವೃತ್ತ, ಡಾ.ರಾಜ್ಕುಮಾರ್ ರಸ್ತೆ, ಹೊಸ ಬಸ್ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಸರ್ಕಾರದ ವಿರುದ್ಧ್ದ ಘೋಷಣೆ ಕೂಗುತ್ತಾ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಸಂತೋಷ್ಕುಮಾರ್ಗೆ ಮನವಿ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮ್ಮದ್ ಮಾತನಾಡಿ, ರಾಜ್ಯದಲ್ಲಿ ಬೆಲೆ ಏರಿಕೆಯಿಂದಾಗಿ ಬಡವರು ಜೀವನ ನಡೆಸುವುದು ಕಷ್ಟವಾಗಿದೆ. ಕಳೆದ ಐದು ವರ್ಷಗಳಲ್ಲಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನರು ನೊಂದಿದ್ದು ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಬಡವರನ್ನು ಶಾಶ್ವತವಾಗಿ ಬಡವರನ್ನಾಗಿಸುವ ಕಾರ್ಯವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಬಿಜೆಪಿ ಸರಕಾರದ ಬಡವರ ವಿರೋಧಿ ಧೋರಣೆ ಖಂಡಿಸಿ ನಾವು ಜನಜಾಗೃತಿ ಮೂಡಿಸುತ್ತಿದ್ದೇವೆ. ತಕ್ಷಣವೇ ಬೆಲೆ ಏರಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಕೆಪಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮನೆ, ಕಚೇರಿ ಮೇಲಿನ ಲೋಕಾ ದಾಳಿಯಲ್ಲಿ ಅಪಾರ ಹಣ ಸಿಕ್ಕಿದೆ. ಇಲ್ಲಿವರೆಗೆ ನಾವು ಕೇವಲ ಶೇ.40ರಷ್ಟು ಸರ್ಕಾರ ನೋಡಿದ್ದೆವು. ಈಗ ಅದು ಶೇ.80ಕ್ಕೆ ಏರಿದೆ ಎಂದು ವ್ಯಂಗ್ಯವಾಡಿದರು.
ಕೆಪಿಸಿಸಿ ಜಗಳೂರು ಉಸ್ತುವಾರಿ ಕಲ್ಲೇಶ್ರಾಜ್ ಮಾತನಾಡಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಗ್ಯಾಸ್ ಸಿಲಿಂಡರ್ ಬೆಲೆ ಕೇವಲ 450 ರೂ. ಇತ್ತು. ಇಂದು ಸಿಲಿಂಡರ್ ಬೆಲೆ 1125ರೂ.ಗೆ ಏರಿಕೆಯಾಗಿದೆ. ಹತ್ತು ವರ್ಷದಲ್ಲಿ ಹತ್ತು ಪಟ್ಟು ಏರಿಸಿರುವ ಕೇಂದ್ರದ ಮೋದಿ ಸರ್ಕಾರ ಜನವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮುಖಂಡರಾದ ಬಿ. ಲೋಕೇಶ್, ಹೊನ್ನೂರ್ಸ್ವಾಮಿ, ಬಸವಾಪುರ ರವಿಚಂದ್ರ, ಗುತ್ತಿದುರ್ಗ ರುದ್ರೇಶ್, ತಾನಾಜಿ ಗೋಸಾಯಿ, ಹಟ್ಟಿ ತಿಪ್ಪೇಸ್ವಾಮಿ, ಮರೇನಹಳ್ಳಿ ಶೇಖರಪ್ಪ, ದಾಸಪ್ಪ, ಬಂಗಾರಪ್ಪ ಮತ್ತಿತರಿದ್ದರು.