ಚೆನ್ನೈ: ಮಿಚೌಂಗ್ ಚಂಡಮಾರುತವು ದಕ್ಷಿಣ ಭಾರತದ ಕಡಲ ಪ್ರದೇಶಗಳಲ್ಲಿ ಅಬ್ಬರಿಸಿ ಅಲೆಗಳನ್ನು ಎಬ್ಬಿಸಿದ್ದು, ಕರಾವಳಿ ಪ್ರದೇಶದ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ. ಮಳೆಯ ತೀವ್ರತೆಗೆ 12 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮಿಳುನಾಡಿನಲ್ಲಿ ಅಬ್ಬರಿಸಿ ಬೊಬ್ಬಿರಿದ ಮಿಚೌಂಗ್ ಚಂಡಮಾರುತ ಇದೀಗ ಕೊಂಚ ತಣ್ಣಗಾಗಿದ್ದು, ಆಂಧ್ರ ಪ್ರದೇಶದ ಮೇಲೆ ತನ್ನ ರೌದ್ರಾವಾತರವನ್ನು ಮುಂದುವರಿಸಿದೆ. ತಮಿಳುನಾಡಿನಿಂದ ಆಂಧ್ರಕ್ಕೆ ಎಂಟ್ರಿ ಕೊಟ್ಟಿರುವ ಮಿಚೌಂಗ್, ಭಾರಿ ಮಳೆಯೊಂದಿಗೆ ಭೂಕುಸಿತಗಳನ್ನು ಉಂಟು ಮಾಡುತ್ತಿದೆ.
ಘೊಡೆ ಕುಸಿತದಿಂದಾಗಿ ತಿರುಪತಿಯಲ್ಲಿ ಓರ್ವ ಬಾಲಕ ಮೃತಪಟ್ಟಿದ್ದು, ತಮಿಳುನಾಡು ಹಾಗೂ ಆಂಧ್ರಪ್ರದೇಶ ಸೇರಿದಂತೆ ಮಳೆಯ ರೌದ್ರವತಾರಕ್ಕೆ ಈವರೆಗೆ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ, ಉಭಯ ರಾಜ್ಯಗಳ ನಡುವೆ ಸಾಕಷ್ಟು ವಿಮಾನ ಮತ್ತು ರೈಲು ಸೇವೆಗಳು ರದ್ದಾಗಿವೆ. ಆಂಧ್ರದ ಒಳಗೂ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಇದನ್ನೂ ಓದಿ: ಪ್ರೇಯಸಿಯನ್ನು ಕೊಂದು ಸ್ಟೇಟಸ್ಗೆ ಫೋಟೋ ಹಾಕಿದ ಪಾಪಿ ಪ್ರಿಯಕರ
ವೈಜಾಗ್, ತಿರುಪತಿ ಮತ್ತು ವಿಜಯವಾಡದ ವಿಮಾನ ನಿಲ್ದಾಣಗಳು ಭಾರಿ ಚಂಡಮಾರುತ ಪರಿಣಾಮ ಸೇವೆಯನ್ನು ಅಮಾನತಿನಲ್ಲಿ ಇಟ್ಟಿವೆ. ಅಲ್ಲದೆ, ರೈಲು ಸೇವೆಗಳಲ್ಲೂ ವ್ಯತ್ಯಯವಾಗಿದೆ. ಒಟ್ಟು 51 ವಿಮಾನಗಳ ಸೇವೆ ಆಂಧ್ರದ ಪ್ರಮುಖ 3 ನಿಲ್ದಾಣಗಳಲ್ಲಿ ರದ್ದಾಗಿದ್ದರೆ, ಸುಮಾರು 100ಕ್ಕೂ ಅಧಿಕ ರೈಲುಗಳ ಸಂಚಾರವೂ ಕೂಡ ರದ್ದಾಗಿದೆ.
ಚಂಡಮಾರುತದ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ವಿಶಾಖಪಟ್ಟಣಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಮಂಗಳವಾರ 23 ವಿಮಾನ ಸೇವೆಗಳನ್ನು ರದ್ದುಗೊಳಿಸಿದರೆ, ತಿರುಪತಿ ಕೂಡ ಎಲ್ಲ 15 ವಿಮಾನ ಸೇವೆಗಳನ್ನು ರದ್ದುಗೊಳಿಸಿದೆ. ಹೈದರಾಬಾದ್-ವಿಜಯವಾಡ-ಬೆಂಗಳೂರು ಏರ್ ಇಂಡಿಯಾ ವಿಮಾನ ಹೊರತುಪಡಿಸಿ, ವಿಜಯವಾಡದಲ್ಲಿ ಎಲ್ಲ 13 ವಿಮಾನಗಳು ತಮ್ಮ ಸೇವೆಯನ್ನು ರದ್ದು ಮಾಡಿವೆ.