ಸಿದ್ದಾಪುರ: ಪರಿಸರ ಸಂರಕ್ಷಣೆಗಾಗಿ ಮಹಾರಾಷ್ಟ್ರದ ರೂಪೇಶ್ ರಾಯಿ ಸೈಕಲ್ ಪ್ರವಾಸ ಕೈಗೊಂಡು ಹತ್ತು ತಿಂಗಳಾಗಿದ್ದು, ಮಂಗಳವಾರ ಜಿಲ್ಲೆ ಪ್ರವೇಶಿಸಿದ್ದಾರೆ.
ಫೆ.18 ರಂದು ದೆಹಲಿಯ ನೋಯ್ಡದಿಂದ ಪ್ರಾರಂಭ ಮಾಡಿದ ಪ್ರವಾಸ 7 ರಾಜ್ಯಗಳನ್ನು ಕ್ರಮಿಸಿ ಇದೀಗ ಜಿಲ್ಲೆ ಪ್ರವೇಶಿಸಿದೆ. ಶಾಲಾ-ಕಾಲೇಜು, ಸಾರ್ವಜನಿಕರು ಸೇರಿದಂತೆ ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ರೂಪೇಶ್ ರಾಯಿ ನೇರವಾಗಿ ಭೇಟಿ ಮಾಡಿದ್ದು, ಪರಿಸರ ಸಂರಕ್ಷಣೆ ಕುರಿತು ಭಾರತೀಯರಲ್ಲಿ ಜಾಗೃತಿ ಮೂಡಿಸುವುದು ಪ್ರವಾಸದ ಉದ್ದೇಶವಾಗಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ತಮಿಳುನಾಡು, ಕೇರಳ, ಗೋವಾ ಪ್ರವಾಸ ಮುಗಿಸಿ ಇದೀಗ ಕರ್ನಾಟಕದಲ್ಲಿ ಜನರನ್ನು ಜಾಗೃತಿ ಮೂಡಿಸುತ್ತಿದ್ದಾರೆ.
ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಇಲ್ಲಿನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಜಾಗೃತಿ ಸಭೆ ಹಾಗೂ ಸಂತ ಅನ್ನಮ್ಮ ಶಾಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಒಟ್ಟು 12 ಸಾವಿರ ಕಿ.ಮೀ. ಸೈಕಲ್ ಪ್ರವಾಸ ಮಾಡಬೇಕಾಗಿದ್ದು, ಕೊಡಗಿನಿಂದ ಹಾಸನ ಮಾರ್ಗವಾಗಿ ಮುಂದೆ ಸಾಗಲಿದೆ. ಜ.26 ರಂದು ಮಹಾರಾಷ್ಟ್ರದ ಅಣ್ಣಾ ಹಜಾರೆ ಗ್ರಾಮದಲ್ಲಿ ಸೈಕಲ್ ಸವಾರಿ ಅಂತ್ಯಗೊಳಿಸಲು ಉದ್ದೇಶಿಸಲಾಗಿದೆ ಎಂದು ರೂಪೇಶ್ ರಾಯಿ ಮಾಹಿತಿ ನೀಡಿದರು.
ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ. ವಾಹನಗಳ ಬಳಕೆ ಹೆಚ್ಚಾದಂತೆ ಮರಣ ಸಂಖ್ಯೆ ಹೆಚ್ಚಾಗುತ್ತಿದೆ. ಕಾಲು ನಡಿಗೆ, ಸೈಕಲ್ ಹಾಗೂ ಸಾರ್ವಜನಿಕ ಬಸ್ಗಳನ್ನು ಬಳಸುವುದು ಸೂಕ್ತ. ಅಲ್ಲದೆ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಅನ್ನು ಬಳಸದಂತೆ ಜನರಲ್ಲಿ ಮನವಿ ಮಾಡಿದರು.