ಬೆಂಗಳೂರು : ಕರೊನಾ ಸೋಂಕು ಮತ್ತು ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಜನರು ಒಂದಿಲ್ಲೊಂದು ರೀತಿಯಲ್ಲಿ ಆನ್ಲೈನ್ ವ್ಯವಹಾರಕ್ಕೆ ಮೊರೆ ಹೋಗಿದ್ದಾರೆ. ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್ ಖದೀಮರು ಅಮಾಯಕರಿಗೆ ಬಲೆ ಬೀಸಿ ಸಂಕಷ್ಟದಲ್ಲಿಯೂ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದಾರೆ.
ವಿಲ್ಸನ್ ಗಾರ್ಡನ್ ನಿವಾಸಿ ಆನ್ಲೈನ್ನಲ್ಲಿ ಔಷಧ ಆರ್ಡರ್ ಮಾಡಿದ್ದರು. ಔಷಧ ಬರುವುದು ತಡವಾದ ಕಾರಣಕ್ಕೆ ಕಂಪನಿಯ ವಾಟ್ಸ್ಆ್ಯಪ್ ನಂಬರ್ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ, ಮೆಡಿಸಿನ್ ಆಸ್ಪತ್ರೆಗೆ ಪಾರ್ಸೆಲ್ ಕಳುಹಿಸುತ್ತೇವೆ. ಮುಂಗಡವಾಗಿ ಹಣ ಪಾವತಿ ಮಾಡಬೇಕೆಂದು ಹಂತ ಹಂತವಾಗಿ 85 ಸಾವಿರ ರೂ.ಗಳನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾನೆ. ಔಷಧ ಮಾತ್ರ ಗ್ರಾಹಕನ ಕೈ ಸೇರಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವ ವಿಚಾರ ಗೊತ್ತಾಗಿ ಕೇಂದ್ರ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ವೇಶ್ಯೆಯ ಬರ್ಬರ ಕೊಲೆ : ಪರಾರಿಯಾಗುತ್ತಿದ್ದ ಆರೋಪಿ ಪೊಲೀಸ್ ವಶಕ್ಕೆ
ಮತ್ತೊಂದು ಪ್ರಕರಣದಲ್ಲಿ ವಾಟ್ಸ್ಆ್ಯಪ್ನಲ್ಲಿ ಬಂದ ಸಂದೇಶದಲ್ಲಿ ಅಮ್ಲಜನಕ ಸಿಲಿಂಡರ್ಗೆ ಸಂಪರ್ಕಿಸಿ ಎಂದು ಉಲ್ಲೇಖಿಸಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿದ ಮಹಿಳೆಯಿಂದ 47 ಸಾವಿರ ರೂ. ಪಡೆದ ಖದೀಮರು ನಾಪತ್ತೆಯಾಗಿದ್ದಾರೆ. ವೈಟ್ಫೀಲ್ಡ್ ಆರ್ಬಿಡಿ ರಸ್ತೆಯ ನೀಲು ಎಂಬುವರು ವಂಚನೆಗೆ ಒಳಗಾದವರು.
ಮೇ 6 ರಂದು ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಕ್ಸಿಜನ್ ಸಿಲಿಂಡರ್ ಅಗತ್ಯವಿದ್ದ ಕಾರಣಕ್ಕೆ ವಾಟ್ಸ್ಆ್ಯಪ್ಗೆ ಬಂದಿದ್ದ ಸಂದೇಶದಲ್ಲಿನ ಮೊಬೈಲ್ ನಂಬರ್ಗೆ ನೀಲು ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ, ‘ಲೊಕೇಷನ್ ಕಳುಹಿಸಿ, ಮನೆಗೆ ಸಿಲಿಂಡರ್ ಡೆಲಿವರಿ ಕೊಡುತ್ತೇವೆ’ ಎಂದು ನಂಬಿಸಿ 47 ಸಾವಿರ ರೂ. ಅನ್ನು ಗೂಗಲ್ ಪೇಯಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಹಣ ಕೊಟ್ಟು ಎಷ್ಟು ಹೊತ್ತಾದರೂ ಸಿಲಿಂಡರ್ ಬಾರದೆ ಇದ್ದಾಗ ಅನುಮಾನ ಬಂದು ಮಹಿಳೆ ಮತ್ತೆ ಕರೆ ಮಾಡಿದಾಗ ಮೊಬೈಲ್ ಸಂಪರ್ಕ ಸಿಕ್ಕಿಲ್ಲ. ನೊಂದ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ವೈಟ್ಫೀಲ್ಡ್ ವಿಭಾಗ ಸಿಇಎನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಸ್ಸಾಂನ ಹೊಸ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಸರ್ಮ ಆಯ್ಕೆ
ಆ್ಯಂಟಿ ಕೋವಿಡ್ ಡ್ರಗ್ ರೂಪಿಸಿದ ಡಿಆರ್ಡಿಒ ! ತುರ್ತು ಬಳಕೆಗೆ ಅನುಮೋದನೆ