| ಜಗನ್ ರಮೇಶ್ ಬೆಂಗಳೂರು
ಕ್ರೆಡಿಟ್ ಕಾರ್ಡ್ ವಂಚನೆಯಿಂದ 3.7 ಲಕ್ಷ ರೂ. ಕಳೆದುಕೊಂಡಿದ್ದಲ್ಲದೆ, ಕಾರ್ಡ್ ಬ್ಲಾಕ್ ಮಾಡಿಸಿದ ನಂತರವೂ 19 ಸಾವಿರ ರೂ. ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಸಂಪೂರ್ಣ ಹಣ ಮರುಪಾವತಿಸುವಂತೆ ಖಾಸಗಿ ಬ್ಯಾಂಕ್ಗೆ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ಅಪರಿಚಿತ ವ್ಯಕ್ತಿಗಳು 16 ಬಾರಿ ಅನಧಿಕೃತ ಟ್ರಾನ್ಸಾಕ್ಷನ್ ಮೂಲಕ ವಂಚಿಸಿದ್ದ 3.9 ಲಕ್ಷ ರೂಪಾಯಿಗೂ ಅಧಿಕ ಹಣ ಹಿಂಪಾವ ತಿಸದ ಬ್ಯಾಂಕ್ ವಿರುದ್ಧ ಬೆಂಗಳೂರಿನ ಮನೋಜ್ ಶಾ ಎಂಬುವರು ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ನ್ಯಾಯಾ ಲಯ, ದೂರುದಾರರು ಕಳೆದುಕೊಂಡಿರುವ 3,93,639 ರೂ.ಗಳನ್ನು ಅವರ ಕ್ರೆಡಿಟ್ ಕಾರ್ಡ್ ಖಾತೆಗೆ ಹಿಂಪಾವತಿಸುವ ಜತೆಗೆ ವ್ಯಾಜ್ಯದ ವೆಚ್ಚ 5 ಸಾವಿರ ರೂ.ಗಳನ್ನು ಪಾವತಿಸುವಂತೆ ಆದೇಶಿಸಿದೆ.
ಕಾರ್ಡ್ ಬ್ಲಾಕ್ ಆದರೂ ಕನ್ನ: ಖಾಸಗಿ ಬ್ಯಾಂಕ್ವೊಂದರ ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದ ಮನೋಜ್ ಶಾ ಅವರಿಗೆ 2018ರ ಜೂ.1ರಂದು ಅಪರಿಚಿತ ವ್ಯಕ್ತಿಗಳು ತಮ್ಮ ಕಾರ್ಡ್ ಮೂಲಕ 5 ಬಾರಿ ಒಟ್ಟು 3,74,200 ರೂ. ವಹಿವಾಟು ನಡೆಸಿರುವುದು ಗಮನಕ್ಕೆ ಬಂದಿತ್ತು. ತಮ್ಮ ಕಾರ್ಡ್ನಿಂದ ತಮಗರಿವಿಲ್ಲದೆ ನಡೆದ ಟ್ರಾನ್ಸಾಕ್ಷನ್ ಬಗ್ಗೆ ಬ್ಯಾಂಕ್ಗೆ ಮಾಹಿತಿ ನೀಡಿ ಕಾರ್ಡ್ ಬ್ಲಾಕ್ ಮಾಡಿಸಿ, ಸೈಬರ್ ಕ್ರೖೆಂ ಪೊಲೀಸರಿಗೂ ದೂರು ನೀಡಿದ್ದರು. ಆದರೂ ಮರುದಿನ ಮತ್ತೆ 11 ಬಾರಿ 19,439 ರೂ. ವಹಿವಾಟು ನಡೆಸಲಾಗಿತ್ತು. ಜೂ.2ರಂದು ನಡೆದಿದ್ದ 11 ಟ್ರಾನ್ಸಾಕ್ಷನ್ಗಳನ್ನು ಬ್ಯಾಂಕ್ ರಿವರ್ಸ್ ಮಾಡಿತ್ತು. ಬಳಿಕ ಬ್ಯಾಂಕ್ನ ಸಲಹೆಯಂತೆ 2 ಡಿಸ್ಪ್ಯೂಟ್ ಅರ್ಜಿ ಸಲ್ಲಿಸಿದ್ದರು.
ಜೂ.5ರಂದು ಸೈಬರ್ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದರು. ಅನಧಿಕೃತ ವಹಿವಾಟಿನ ಬಗ್ಗೆ ಬ್ಯಾಂಕಿಂಗ್ ಒಂಬುಡ್ಸ್ಮನ್ಗೂ ದೂರು ನೀಡಿದ್ದ ಮನೋಜ್, 3.7 ಲಕ್ಷ ರೂ. ಟ್ರಾನ್ಸಾಕ್ಷನ್ ರಿವರ್ಸ್ ಮಾಡುವಂತೆ ಬ್ಯಾಂಕ್ಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ, ಆ.6 ಮತ್ತು 10ರಂದು ಪತ್ರ ಬರೆದಿದ್ದ ಬ್ಯಾಂಕ್, ಮೊದಲ ಬಾರಿ ನಡೆದ 5 ಹಾಗೂ ಎರಡನೇ ಬಾರಿ ನಡೆದಿರುವ 11 ಟ್ರಾನ್ಸಾಕ್ಷನ್ಗಳೂ ಸೆಕ್ಯೂರ್ಡ್ ಆಗಿವೆ. ಒಂದೊಮ್ಮೆ ಅದು ವಂಚನೆಯೇ ಆಗಿದ್ದರೆ, ಅದಕ್ಕೆ ಕಾರ್ಡ್ ಬಳಕೆದಾರರೇ ಹೊಣೆಯಾಗಿರುತ್ತಾರೆ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ಗೆ ಮನೋಜ್ ಲೀಗಲ್ ನೋಟಿಸ್ ನೀಡಿದ್ದರು.
ಕೋರ್ಟ್ ಆದೇಶವೇನು?
ಬ್ಯಾಂಕಿಂಗ್ ಒಂಬುಡ್ಸ್ ಮನ್ ಸಲಹೆಯ ಸಂಪೂರ್ಣ ಸಾರಾಂಶ ಸಲ್ಲಿಸುವಂತೆ ಬ್ಯಾಂಕ್ಗೆ ಕೋರ್ಟ್ ಸೂಚಿಸಿತ್ತು. ಆದರೆ, ಬ್ಯಾಂಕ್ ಸಲ್ಲಿಸಿರಲಿಲ್ಲ. ಬ್ಯಾಂಕ್ನ ಈ ನಡೆಯಿಂದ, ದಾಖಲೆಗಳನ್ನು ಸಲ್ಲಿಸಿದರೆ ಅದು ತಮ್ಮ ವಿರುದ್ಧವಾಗಬಹುದು ಎಂಬ ಕಾರಣದಿಂದಲೇ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ಭಾವನೆ ಮೂಡುತ್ತದೆ. ಹೀಗಿರುವಾಗ ಒಂಬುಡ್ಸ್ ಮನ್ನ ಅನಿಸಿಕೆಯಂತೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಪ್ರಕರಣದಲ್ಲಿ ಬ್ಯಾಂಕ್ನ ಸೇವಾ ನ್ಯೂನತೆಗಿಂತ ಸಂಪೂರ್ಣ ನಿರ್ಲಕ್ಷ್ಯ ಕಾಣುತ್ತಿದೆ. ಆದ್ದರಿಂದ, ದೂರುದಾರರಿಗೆ ಸಂಪೂರ್ಣ ಹಣ ಹಿಂಪಾವತಿಸಬೇಕೆಂದು ಬ್ಯಾಂಕ್ಗೆ ಆದೇಶಿಸಿದೆ.
ಬ್ಯಾಂಕ್ ವಾದವೇನು?
ದೂರುದಾರರು ಆರೋಪಿಸಿದ್ದ 16 ವಹಿವಾಟುಗಳ ಬಗ್ಗೆ ಬ್ಯಾಂಕ್ನ ವಂಚನೆ ತನಿಖಾ ತಂಡದಿಂದ ವಿಸõತವಾದ ತನಿಖೆ ನಡೆಸಲಾಗಿದೆ. ಎಲ್ಲ ವಹಿವಾಟುಗಳೂ ಕಾರ್ಡ್ ಸಂಖ್ಯೆ, ಅವಧಿ, ಸಿವಿವಿ ಹಾಗೂ ಒಟಿಪಿಗಳನ್ನು ಬಳಸಿ ನಡೆಸಿರುವ ಸುರಕ್ಷಿತ ವಹಿವಾಟುಗಳೆಂದು ತಿಳಿದುಬಂದಿದೆ. ಸಿವಿವಿ, ಒಟಿಪಿಗಳಿಲ್ಲದೆ ಕಾರ್ಡ್ ವಹಿವಾಟು ನಡೆಸಲು ಸಾಧ್ಯವಿಲ್ಲ. ಕಾರ್ಡ್ಗಳ ದುರ್ಬಳಕೆ ಆಗಬಾರದೆಂದರೆ ಬಳಕೆದಾರರು ತಮ್ಮ ಕಾರ್ಡ್ಗೆ ಸಂಬಂಧಿಸಿದ ಮಾಹಿತಿಗಳನ್ನು ಗೋಪ್ಯವಾಗಿಟ್ಟುಕೊಳ್ಳಬೇಕು. ಪ್ರಕರಣದಲ್ಲಿ ನಡೆದಿರುವ ಎಲ್ಲ ಟ್ರಾನ್ಸಾಕ್ಷನ್ಗಳಿಗೂ ದೂರುದಾರರೇ ಹೊಣೆ ಎಂದಿದ್ದ ಬ್ಯಾಂಕ್, ಪ್ರಕರಣದಲ್ಲಿ ತಮ್ಮಿಂದ ಯಾವುದೇ ಸೇವಾ ನ್ಯೂನತೆಯಾಗಿಲ್ಲ ಎಂದು ವಾದಿಸಿತ್ತು.