ಬಳ್ಳಾರಿ: ಮುತ್ತಿನ ವಿಚಾರದಲ್ಲೂ ಇಲ್ಲಿ ಮೋಸ ಮಾಡಲಾಗಿದೆ. ಅದು ಒಬ್ಬಿಬ್ಬರಿಗಲ್ಲ, ಬರೋಬ್ಬರಿ ಐನೂರಕ್ಕೂ ಅಧಿಕ ಜನರಿಗೆ. ಆ ಮೂಲಕ ಬಹುಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬಳ್ಳಾರಿಯ ಎಸ್ಪಿ ಸರ್ಕಲ್ ಬಳಿ ಇರುವ, ಆಂಧ್ರಪ್ರದೇಶ ಮೂಲದ ದುಡಂ ರವಿ ಎಂಬಾತನ ಮಾಲೀಕತ್ವದ ಪರ್ಲ್ ವರ್ಲ್ಡ್ ಎನ್ನುವ ಕಂಪನಿಯಿಂದ ಈ ಭಾರಿ ವಂಚನೆ ನಡೆದಿದೆ. ಮೋಸ ಹೋದವರು ಈಗ ಒಬ್ಬರ ಹಿಂದೊಬ್ಬರಂತೆ ದೂರು ನೀಡಲು ಬರುತ್ತಿದ್ದಾರೆ.
ಎರಡು ಸಾವಿರ ಠೇವಣಿ ಇಟ್ಟರೆ ಒಂದು ಮುತ್ತಿನ ಪೊಟ್ಟಣ ಕೊಡುತ್ತ ಇದ್ದ ಕಂಪನಿ, ಆ ಬಳಿಕ ಆ ಪೊಟ್ಟಣದಲ್ಲಿರುವ ಮುತ್ತನ್ನು ಹತ್ತು ದಿನಗೊಳಗೆ ಪೋಣಿಸಿ ಕೊಟ್ಟರೆ 200 ರೂಪಾಯಿ ಕೊಡುವುದಾಗಿ ಹೇಳಿತ್ತು. ಹೆಚ್ಚಿನ ಹಣದ ಆಸೆಗೆ ಹಲವರು ಒಂದರಿಂದ ಹತ್ತು ಲಕ್ಷ ರೂಪಾಯಿವರೆಗೂ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದ್ದು, ಐನೂರಕ್ಕೂ ಹೆಚ್ಚು ಜನರಿಂದ ಸುಮಾರು 5 ಕೋಟಿ ರೂ. ಹಣ ಸಂಗ್ರಹಿಸಲಾಗಿದೆ ಎನ್ನಲಾಗಿದೆ. ಈ ಕುರಿತು ಇನ್ನೂ ಹೆಚ್ಚಿನ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಎರಡು ದಿನಗಳ ಹಿಂದೆ ಕಂಪನಿಯ ಮೋಸದ ಜಾಲ ಬಯಲಿಗೆ ಬಂದಿದ್ದು, ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಕಂಪನಿ ಮಾಲಿಕ ದುಡಂ ರವಿ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಕಂಪನಿ ಮ್ಯಾನೇಜರ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜೇಮ್ಸ್ಗೆ ಎತ್ತಂಗಡಿ ಆತಂಕ!; ನಿರ್ಮಾಪಕರು ಏನೆಂದರು?