ತುಮಕೂರು: ಅದಾಯಕ್ಕೂ ಮೀರಿ ಅಧಿಕ ಆಸ್ತಿ ಗಳಿಸಿದ ಆರೋಪದ ಮೇಲೆ ವಿವಿಧ ಇಲಾಖೆಯ ಹತ್ತು ಅಧಿಕಾರಿಗಳಿಗೆ ಸೇರಿದ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಬೆಂಗಳೂರು, ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಕೊಪ್ಪಳ, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಮಂಗಳೂರಿನಲ್ಲಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿಯಾಗಿದೆ.
ತುಮಕೂರು ಜಿಲ್ಲೆ ಮಧುಗಿರಿ ವಿಭಾಗದ ಕೆಆರ್ಡಿಐಎಲ್ ಜೆಇ ಹನುಮಂತರಾಯಪ್ಪ ಮನೆ ಹಾಗೂ ಕಚೇರಿ ಸೇರಿದಂತೆ ಒಟ್ಟು 6 ಕಡೆ ಲೋಕಾಯುಕ್ತ ದಾಳಿ ನಡೆದಿದ್ದು, ಈ ವೇಳೆ ಅಪಾರ ಪ್ರಮಾಣದ ಚರ ಹಾಗೂ ಸ್ಥಿರಾಸ್ತಿ ಪತ್ತೆಯಾಗಿದೆ. ತುಮಕೂರಿನ ಶಿರಾ ಗೇಟ್, ಮಧುಗಿರಿ ತಾಲೂಕಿನ ಮಿಡಿಗೇಶಿ, ತುಮಕೂರು ತಾಲ್ಲೂಕಿನ ಮಲ್ಲಸಂದ್ರ ಬಳಿಯಿರುವ ಫಾರ್ಮ್ ಹೌಸ್, ಗುಬ್ಬಿ ತಾಲೂಕಿನ ಬಡಕನಪಾಳ್ಯದಲ್ಲಿರುವ ಫಾರ್ಮ್ ಹೌಸ್, ಮಧುಗಿರಿ ಉಪವಿಭಾಗದ ಕೆಆರ್ಐಡಿಎಲ್ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.
ಮಧುಗಿರಿ ತಾಲೂಕಿನ ಕೆ.ಕೃಷ್ಣಾಪುರ, ಗುಬ್ಬಿ ತಾಲೂಕಿನ ಬಡಕನಪಾಳ್ಯದಲ್ಲಿ ಒಟ್ಟು 8 ಎಕರೆ 15 ಗುಂಟೆ ಜಮೀನು, ಮಧುಗಿರಿ ನಗರದ ಲಿಂಗೇನಹಳ್ಳಿಯಲ್ಲಿ 2 ನಿವೇಶನ, ತುಮಕೂರು ನಗರದಲ್ಲಿ ಮೂರು ಅಂತಸ್ತಿನ ಮನೆ, 2 ಕಾರು, 2 ದ್ವಿಚಕ್ರ ವಾಹನ, ಚಿನ್ನಾಭರಣ ಬೆಳ್ಳಿ ವಸ್ತುಗಳು ದಾಳಿ ವೇಳೆ ಪತ್ತೆಯಾಗಿದೆ. 3 ಕೋಟಿ 69 ಲಕ್ಷದ 72 ಸಾವಿರದ 500 ರೂಪಾಯಿ ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಅಧಿಕಾರಿಗಳು ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.