ಬೆಂಗಳೂರು: ಕರೊನಾ ಸೋಂಕಿತನೊಬ್ಬ ಆಸ್ಪತ್ರೆಯಿಂದಲೇ ಪರಾರಿಯಾಗಿದ್ದು, ಇದೀಗ ಆಸ್ಪತ್ರೆ ಸಿಬ್ಬಂದಿ ಮತ್ತು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ. ಮಾತ್ರವಲ್ಲ ಸಾರ್ವಜನಿಕರ ಆತಂಕಕ್ಕೂ ಕಾರಣವಾಗಿದ್ದಾನೆ.
ಕೋವಿಡ್-19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಅತ್ತಿಗುಪ್ಪೆ ನಿವಾಸಿ ಮಂಜುನಾಥ್ ಎಂಬಾತನನ್ನು ಕರೊನಾ ಸೋಂಕಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೆಪ್ಟೆಂಬರ್ 29ರಂದು ದಾಖಲಿಸಲಾಗಿತ್ತು.
ಇದನ್ನೂ ಓದಿ: ಕರೊನಾ ಸೋಂಕಿನ ಲಕ್ಷಣ ಇದ್ಯಾ?: ಹಾಗಿದ್ರೆ ಏನ್ ಮಾಡ್ಬೇಕು ಅಂತ ಸಚಿವರು ಹೇಳಿದ್ದಾರೆ, ನೋಡಿ…
ಆದರೆ ಇಲ್ಲಿದ್ದ ಕರೊನಾ ಸೋಂಕಿತರನ್ನು ಭಾನುವಾರ ಸಂಜೆ 6 ಗಂಟೆ ಸಮಯದಲ್ಲಿ ಆಂಬುಲೆನ್ಸ್ ಮೂಲಕ ಎಂ.ಪಿ.ಬಿ. ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿತ್ತು. ಆಸ್ಪತ್ರೆಯ ಸಿ-ಬ್ಲಾಕ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜುನಾಥ್, ಈ ಸ್ಥಳಾಂತರದ ವೇಳೆ ಆಸ್ಪತ್ರೆ ಸಿಬ್ಬಂದಿಯ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ರಶ್ಮಿ ಅವರು ವಿ.ವಿ.ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.