ಹಾನಗಲ್ಲ: ಮಹಾಮಾರಿ ಕರೊನಾ ಸೋಂಕು ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಕಾಡಲಾರಂಭಿಸಿದ್ದು, 91 ವಿದ್ಯಾರ್ಥಿಗಳು ಮತ್ತು 11 ಶಿಕ್ಷಕರಿಗೆ ಪಾಸಿಟಿವ್ ಆಗಿರುವುದರಿಂದ ತಾಲೂಕಿನ ನಾಲ್ಕು ಶಾಲೆಗಳಿಗೆ ರಜೆ ಘೊಷಿಸಲಾಗಿದೆ.
ತಾಲೂಕಿನಲ್ಲಿ ಕರೊನಾ ಮೂರನೇ ಅಲೆ ಆರಂಭಗೊಂಡ ಮೇಲೆ ಇದುವರೆಗೆ 345 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ತಾಲೂಕಿನ ಮಹರಾಜಪೇಟೆ ಗ್ರಾಮದ ವ್ಯಾಪ್ತಿಯ ಜವಾಹರ ನವೋದಯ ಶಾಲೆಯ 13 ವಿದ್ಯಾರ್ಥಿಗಳು ಹಾಗೂ 2 ಶಿಕ್ಷಕರು, ಕೊಪ್ಪರಸಿಕೊಪ್ಪ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ 41 ವಿದ್ಯಾರ್ಥಿಗಳು ಹಾಗೂ 3 ಶಿಕ್ಷಕರು, ಗೊಂದಿ ಗ್ರಾಮದ ವರದಾ ಪ್ರೌಢ ಶಾಲೆಯ 12 ವಿದ್ಯಾರ್ಥಿಗಳು, ಹಿರೇಕಾಂಶಿ ಪ್ರಾಥಮಿಕ ಶಾಲೆಯ 16 ವಿದ್ಯಾರ್ಥಿಗಳು, 3 ಶಿಕ್ಷಕರು, ಹೇರೂರಿನ ಒಬ್ಬ ಶಿಕ್ಷಕ, ಹಿರೇಬಾಸೂರಿನ ವಿದ್ಯಾರ್ಥಿ, ಹಿರೇಕಣಗಿಯ 9 ವಿದ್ಯಾರ್ಥಿಗಳು ಹಾಗೂ 2 ಶಿಕ್ಷಕರು ಸೋಂಕಿಗೆ ತುತ್ತಾಗಿದ್ದಾರೆ. ಶಾಲಾ ವಿದ್ಯಾರ್ಥಿಗಳಲ್ಲಿ ಸೋಂಕು ವೇಗವಾಗಿ ಹರಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ತಾಲೂಕಿನ ಜವಾಹರ ನವೋದಯ ವಿದ್ಯಾಲಯ, ಕೊಪ್ಪರಸಿಕೊಪ್ಪ ಪ್ರಾಥಮಿಕ ಶಾಲೆ, ಹಿರೇಕಾಂಶಿ ಪ್ರಾಥಮಿಕ ಶಾಲೆ, ಹಿರೇಕಣಗಿ ಪ್ರೌಢಶಾಲೆಗಳಿಗೆ ರಜೆ ಘೊಷಿಸಲಾಗಿದೆ. ಕೊಪ್ಪರಸಿಕೊಪ್ಪ ಪ್ರೌಢಶಾಲೆ ಪ್ರಾಥಮಿಕ ಶಾಲೆ ಆವರಣದಲ್ಲಿ ಇರುವುದರಿಂದ ಮುಂಜಾಗ್ರತೆ ಕ್ರಮವಾಗಿ ಅದಕ್ಕೂ ರಜೆ ನೀಡಲಾಗಿದೆ.
ತಾಲೂಕಿನಲ್ಲಿ ಸೋಂಕಿಗೆ ಒಳಗಾದ ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಿ, ಎಲ್ಲರ ಸ್ವ್ಯಾಬ್ ಪಡೆಯಲಾಗುತ್ತಿದೆ.