ಉಳ್ಳಾಲ: ಕರೊನಾ ಸೋಂಕಿತರ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರ ಕೋವಿಡ್ ಕೇರ್ ಕೇಂದ್ರವಾಗಿ ಮಾರ್ಪಾಟಾಗಲಿದೆ.
ಕೇಂದ್ರಕ್ಕಿಂತ ನಾಲ್ಕೈದು ಕಿ.ಮೀ. ಅಂತರದಲ್ಲೇ ದೊಡ್ಡ ಆಸ್ಪತ್ರೆಗಳಿರುವುದರಿಂದ ಇಲ್ಲಿ ವೆಂಟಿಲೇಟರ್ ವ್ಯವಸ್ಥೆಯಿಲ್ಲ. ಆದರೂ ರೋಗಿಗೆ ತುರ್ತು ಸಂದರ್ಭ ಆಕ್ಸಿಜನ್ ವ್ಯವಸ್ಥೆಗಾಗಿ ಆರು ತಿಂಗಳ ಹಿಂದೆಯೇ ಆಕ್ಸಿಜನ್ ಪೈಪ್ಲೈನ್ ಆರಂಭಿಸಿದ್ದು ಈಗ ಮುಕ್ತಾಯಗೊಂಡಿದೆ. 50 ಬೆಡ್ಗಳಲ್ಲಿ 40ನ್ನು ಕೋವಿಡ್ಗೆ ಮೀಸಲಿಡುವ ತೀರ್ಮಾನ ಕೈಗೊಳ್ಳಲಾಗಿದೆ. ಇದರ ನಿರ್ವಹಣೆಗೆ ಯೇನೆಪೋಯ ಆಸ್ಪತ್ರೆ ಕೈಜೋಡಿಸಿದ್ದು, ಆಸ್ಪತ್ರೆ ನರ್ಸ್ಗಳು, ವೈದ್ಯರು, ಅಟೆಂಡರ್ಗಳೇ ಕೇಂದ್ರವನ್ನು ನಿಭಾಯಿಸಲಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರವನ್ನು ಕೋವಿಡ್ ಕೇಂದ್ರವಾಗಿಸಿದರೂ ಚಿಕಿತ್ಸೆಗೆ ಬರುವ ಹೊರರೋಗಿಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆಕ್ಸಿಜನ್ ತಯಾರಿ ಘಟಕ ನಿರ್ಮಿಸುವ ಯೋಜನೆಯೂ ಇದೆ.
ಕೋವಿಡ್ ಕೇಂದ್ರ ಕಾರ್ಯಾಚರಿಸುವ ಮೊದಲು ಪ್ರತಿದಿನ ಬರುವ ಹೊರರೋಗಿಗಳಿಗೆ ತೊಂದರೆಯಾಗದಂತೆ ಪ್ರವೇಶ ಮತ್ತು ನಿರ್ಗಮನ ದ್ವಾರ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ 30 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಈ ಅನುದಾನದಲ್ಲಿ ಆಮ್ಲಜನಕ ತಯಾರಿ ಘಟಕ ನಿರ್ಮಿಸಲಾಗುವುದು.
ಯು.ಟಿ.ಖಾದರ್, ಶಾಸಕ
ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ 250-500ರಷ್ಟು ಹೊರರೋಗಿಗಳು ಬರುವುದರಿಂದ ಕೋವಿಡ್ ಕೇಂದ್ರವಾಗಿಸಿದರೆ ಸಮಸ್ಯೆಯಾದರೂ ಅಗತ್ಯ ಸಂದರ್ಭ ಬಂದರೆ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆಯಿದ್ದು, ಅದು ಬಳಕೆ ಮಾಡುವುದರಲ್ಲಿ ತಪ್ಪಿಲ್ಲ.
ಇಸ್ಮಾಯಿಲ್ ಶಾಫಿ
ಸಾಮಾಜಿಕ ಕಾರ್ಯಕರ್ತ