ಬೆಂಗಳೂರು: ರಾಜಧಾನಿಯಲ್ಲಿ ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನ ಜಾವ 5 ಗಂಟೆವರೆಗೂ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರಲಿದೆ. ನಗರದಲ್ಲಿ ಕರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಜನದಟ್ಟಣೆ ತಪ್ಪಿಸುವ ಸಲುವಾಗಿ ಭಾನುವಾರ ಸಂಪೂರ್ಣ ಲಾಕ್ಡೌನ್ಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಐಪಿಸಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಪ್ರತಿದಿನ ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿದೆ. ಲಾಕ್ಡೌನ್ ವೇಳೆ ಸುಖಾಸುಮ್ಮನೆ ಮನೆಯಿಂದ ಹೊರಬಂದರೆ ಮುಲಾಜಿಲ್ಲದೆ ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳು ಕೇಸ್ ದಾಖಲಿಸಿ ದಂಡ ವಿಧಿಸಲಿದ್ದಾರೆ. ನಗರದೆಲ್ಲೆಡೆ ನಾಕಾಬಂದಿ ಅಳವಡಿಸಿ ವಾಹನಗಳ ತಪಾಸಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಭಾನುವಾರ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿ ಇರಲಿದೆ. ಅಗತ್ಯ ವಸ್ತುಗಳು ಮತ್ತು ಸೇವೆ ಮಾತ್ರ ಸಿಗಲಿದೆ. ಅನಾವಶ್ಯಕವಾಗಿ ಹೊರಬಂದರೆ ಕೇಸ್ ದಾಖಲಿಸಲಾಗುವುದು.
| ಭಾಸ್ಕರ್ ರಾವ್ ನಗರ ಪೊಲೀಸ್ ಆಯುಕ್ತ
ಸರಕು ಸಾಗಣೆ ಮತ್ತು ತುರ್ತು ಸೇವೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿರಲಿದೆ. ಉಳಿದಂತೆ, ಪಾಸ್ ಇರುವುದಾಗಿ ಹೇಳಿಕೊಂಡು ರಸ್ತೆಗಿಳಿದರೆ ಕೇಸ್ ದಾಖಲಾಗುತ್ತದೆ ಎಂದು ಭಾಸ್ಕರ್ ರಾವ್ ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ರಸ್ತೆ-ಮನೆಯಲ್ಲೇ ಕರೊನಾ ಮರಣಮೃದಂಗ
ಏನೆಲ್ಲ ಸೌಲಭ್ಯ ಇರಲಿದೆ?: ಆಸ್ಪತ್ರೆ, ಮೆಡಿಕಲ್ ಶಾಪ್, ದಿನಸಿ ಅಂಗಡಿ, ಹೋಟೆಲ್ (ಪಾರ್ಸೆಲ್), ತರಕಾರಿ ಅಂಗಡಿ, ಮಾಂಸದಂಗಡಿ, ಹಾಲು ಹಾಗೂ ಪೊಲೀಸ್, ವೈದ್ಯಕೀಯ, ಮಾಧ್ಯಮ ಸೇವೆ ಸಿಗಲಿದೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.
ಯಾವ್ಯಾವ ಸೇವೆಗಳು ಇರಲ್ಲ?: ಬಿಎಂಟಿಸಿ, ಕೆಎಸ್ಆರ್ಟಿಸಿ, ಕ್ಯಾಬ್, ಆಟೋ ಸೇವೆ ಇರುವುದಿಲ್ಲ. ವಾಣಿಜ್ಯ ಮಳಿಗೆ ಇನ್ನಿತರ ಅಂಗಡಿಗಳು ಸಂಪೂರ್ಣ ಬಂದ್ ಆಗಿರಲಿವೆ.
ಇಂದು ಸರ್ಕಾರಿ ನೌಕರರಿಗೆ ರಜೆ: ಕರೊನಾ ಸೋಂಕು ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರ 1 ಮತ್ತು 3ನೇ ಶನಿವಾರವೂ ಸರ್ಕಾರಿ ನೌಕರರಿಗೆ ರಜೆ ಘೋಷಣೆ ಮಾಡಿದೆ. ಆಗಾಗಿ ಶನಿವಾರ ಸರ್ಕಾರಿ ಕಚೇರಿಗಳ ಸೇವೆ ಇರುವುದಿಲ್ಲ.